ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತವಲ್ಲ!
Team Udayavani, Nov 19, 2018, 6:00 AM IST
ಬೆಂಗಳೂರು: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 2012 ರ ಬೇಸ್ಲೈನ್ ಸಮೀಕ್ಷೆ ಪ್ರಕಾರ ರಾಜ್ಯ ಸರ್ಕಾರ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದ್ದು ಸೋಮವಾರ ಅಧಿಕೃತ ಘೋಷಣೆಯಾಗಲಿದೆ. ಆದರೆ, ರಾಜ್ಯದಲ್ಲಿ ಇನ್ನೂ 4.50 ಲಕ್ಷ ಮನೆಗಳಿಗೆ ಶೌಚಾಲಯ ಇಲ್ಲ.
ಏಕೆಂದರೆ, ಕೇಂದ್ರ ಸರ್ಕಾರದ 2012ರ ಬೇಸ್ಲೈನ್ ಸಮೀಕ್ಷೆಯಲ್ಲಿ ಸೇರ್ಪಡೆಯಾಗಿರುವ ಮನೆಗಳಿಗೆ ಮಾತ್ರ ಶೌಚಾಲಯ ನಿರ್ಮಿಸಬೇಕು ಎಂದು ಸೂಚಿಸಿತ್ತು. ಈ ಆದೇಶ ಮೀರಿದರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ದಂಡ ವಸೂಲಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸುತ್ತೊ¤à ಲೆ ಹೊರಡಿಸಿತ್ತು.
2012ರ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 70 ಲಕ್ಷ ಶೌಚಾಲಯ ರಹಿತ ಕುಟುಂಬಗಳು ಇವೆ ಎಂದು ಗುರುತಿಸಲಾಗಿತ್ತು. ಅದರ ಆಧಾರದಲ್ಲಿ ಶೌಚಾಲಯಗಳು ನಿರ್ಮಾಣವಾಗಿತ್ತು. ಆದರೆ, ಬೇಸ್ಲೈನ್ ನಂತರ ನಿರ್ಮಾಣವಾದ 4.50 ಮನೆಗಳಿಗೆ ಶೌಚಾಲಯ ನಿರ್ಮಾಣವಾಗಿಲ್ಲ.
ಬೇಸ್ಲೈನ್ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಕ್ಕೆ ನಿಯಮ ಮೀರಿ ಶೌಚಾಲಯ ನಿರ್ಮಾಣ ಮಾಡಿದರೆ ಪಿಡಿಒ ಹೊಣೆಗಾರರು ಎಂದು ತಿಳಿಸಿದ್ದರಿಂದ 4.50 ಲಕ್ಷ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಿಲ್ಲ.
ಈ ನಡುವೆ 2012 ಸಮೀಕ್ಷೆ ವ್ಯಾಪ್ತಿಗೊಳಪಡದ 1.5 ಲಕ್ಷ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆೆ. ಕೆಲವು ಅಧಿಕಾರಿಗಳು ಬೇಸ್ಲೈನ್ ನಿಯಮ ಮೀರಿ ಅನುದಾನ ಸಹ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರ ದಂಡ ವಸೂಲಿಗೆ ಆದೇಶ ನೀಡಿರುವುದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.
4.5 ಲಕ್ಷ ಮನೆಗಳಿಗಿಲ್ಲ ಶೌಚಾಲಯ
2012 ಸಮೀಕ್ಷೆಯಿಂದ ಹೊರಗುಳಿದ ಶೌಚಾಲಯ ರಹಿತ ಕುಟುಂಬಗಳ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಹೊಸದಾಗಿ ಆದೇಶ ಮಾಡಿದ್ದು, ಅದರಂತೆ ಪಿಡಿಒಗಳು ಹೊಸದಾಗಿ ನಿರ್ಮಾಣಗೊಂಡ ಮನೆಗಳ ಬಗ್ಗೆ ಸಮೀಕ್ಷೆ ನಡೆಸಿದ್ದು, ಸುಮಾರು 4.5 ಲಕ್ಷ ಶೌಚಾಲಯ ರಹಿತ ಕುಟುಂಬಗಳು ಪತ್ತೆಯಾಗಿವೆ. ಆ ಕುಟುಂಬಳಿಗೆ ಫೆಬ್ರವರಿಯೊಳಗೆ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಮೌಖೀಕ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೇಸ್ಲೈನ್ ಸಮೀಕ್ಷೆಯಲ್ಲಿ ಹೆಸರಿಲ್ಲದ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿದರೆ, ನಿಯಮ ಬಾಹಿರ ಎಂದು ಪಿಡಿಒಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರಿಂದ ದಂಡ ವಸೂಲಿ ಮಾಡುವುದಾಗಿ ಸೂಚಿಸಿದ್ದಾರೆ. ಮತ್ತೂಂದು ಆದೇಶದಲ್ಲಿ 2012 ಸಮೀಕ್ಷೆಯಿಂದ ಹೊರಗಿದ್ದ ಮನೆಗಳಿಗೂ ಫೆಬ್ರವರಿ ಒಳಗೆ ಶೌಚಾಲಯ ನಿರ್ಮಿಸಲು ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದಿಂದ ಸ್ಪಷ್ಟೀಕರಣ ಪಡೆಯದೇ ಆದೇಶ ಹೊರಡಿಸಿ ಕೆಳ ಹಂತದ ಅಧಿಕಾರಿಗಳಲ್ಲಿ ಗೊಂದಲ ಸೃಷ್ಠಿಸಿದೆ.
– ಹೆಸರು ಹೇಳಲಿಚ್ಚಿಸದ ಪಿಡಿಒ
ಕೇಂದ್ರ ಸರ್ಕಾರದ ಆದೇಶದಂತೆ ಬೇಸ್ಲೈನ್ ಸಮೀಕ್ಷೆಯಿಂದ ಹೊರಗುಳಿದ ಮನೆಗಳಿಗೆ ಶೌಚಾಲಯ ಕಟ್ಟಲು ಅವಕಾಶ ಇರಲಿಲ್ಲ. ಈಗ ಕೇಂದ್ರ ಸರ್ಕಾರ ಅವುಗಳಿಗೂ ಅನುಮತಿ ನೀಡಿದೆ. ರಾಜ್ಯದಲ್ಲಿ ಸುಮಾರು 4.5 ಲಕ್ಷ ಶೌಚಾಲಯ ರಹಿತ ಮನೆಗಳು ಪತ್ತೆಯಾಗಿದ್ದು, ಅವುಗಳಿಗೂ ಶೌಚಾಲಯ ನಿರ್ಮಿಸುವಂತೆ ಸೂಚಿಸಲಾಗಿದೆ.
– ಎಲ್.ಕೆ. ಅತೀಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ.
– ಶಂಕರ ಪಾಗೋಜಿ