ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ
Team Udayavani, Nov 29, 2018, 6:00 AM IST
ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಗ್ರಾಮದ ಸಮೀಪ ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ. ಆಹಾರ ಹುಡುಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಅಲೆಯುವಾಗ ಜಾರಿ ಬಿದ್ದು ಆನೆಯ ಕಾಲಿಗೆ ಪೆಟ್ಟಾಗಿತ್ತು. 6 ತಿಂಗಳ ಕರುಳ ಕುಡಿ ಜೊತೆಯಲ್ಲೇ ಇದ್ದುದರಿಂದ ತನ್ನ ಜೊತೆಗೆ ಅದರ ಹಸಿವು ಮತ್ತು ನೀರಡಿಕೆ ನೀಗಿಕೊಳ್ಳಲು ಗಾಯಾಳು ಆನೆ ಸುತ್ತಾಡಲೇ ಬೇಕಿತ್ತು. ನಾಲ್ಕು ದಿನಗಳ ಹಿಂದೆ
ತೋಟವೊಂದರಲ್ಲಿ ನೀರು ಕಣ್ಣಿಗೆ ಬೀಳುತ್ತಿ ದ್ದಂತೆಯೇ ಮೊದಲು ತಾಯಿ ಆನೆ ಹಳ್ಳಕ್ಕೆ ಇಳಿಯಿತು. ನೀರಿದ್ದ ಜಾಗ ಕೆಸರುಗುಂಡಿಯಾದ್ದರಿಂದ ದಢೂತಿ ಆನೆ ಇಳಿಯುತ್ತಿದ್ದಂತೆ ಹೂತು ಕೊಂಡಿತು. ಸುಮಾರು 25 ವರ್ಷದ ಹೆಣ್ಣಾನೆಗೆ ಮೊದಲೇ ಕಾಲಿಗೆ
ಪೆಟ್ಟಾಗಿದ್ದರಿಂದ ಎಷ್ಟೇ ಹೋರಾಟ ಮಾಡಿದ್ರೂ ಮೇಲೇಳಲು ಸಾಧ್ಯವಾಗಿರಲಿಲ್ಲ. ಸ್ಥಳೀಯರಿಂದ ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಸಿಬ್ಬಂದಿ ಸಹಾಯದಿಂದ ಹರಸಾಹಸ ಪಟ್ಟರೂ ಮೇಲೆತ್ತಲು ಆಗಲೇ ಇಲ್ಲ.
ಈ ಹಿನ್ನೆಲೆಯಲ್ಲಿ ದುಬಾರೆ ಅರಣ್ಯದಿಂದ 2 ಪಳಗಿದ ಆನೆ, ಹಿಟಾಚಿ ಹಾಗೂ ಬಂಡಿಪುರದಿಂದ ವೈದ್ಯರನ್ನು ಕರೆಸಿಕೊಂಡ ಅರಣ್ಯಾಧಿಕಾರಿಗಳು ಹಾಗೂ ವೈದ್ಯರ ತಂಡ ಮಂಗಳವಾರ ಬೆಳಗ್ಗೆಯಿಂದ ನಿರಂತರ ಕಾರ್ಯಾಚರಣೆ ನಡೆಸಿ ಕೆಸರಲ್ಲಿ ಹೂತು ನರಳುತ್ತಿದ್ದ ಆನೆಯನ್ನು ಪಾರು ಮಾಡಿದರು. ನಿತ್ರಾಣವಾಗಿರುವ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ, ಮರಿಯಾನೆ, ತಾಯಿ
ಪಕ್ಕದಲ್ಲೇ ಇದ್ದರೆ ಮೇಲೆತ್ತುವ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಅದನ್ನು ಪಕ್ಕದ ಮರಕ್ಕೆ ಕಟ್ಟಿ ಹಾಕಲಾಗಿತ್ತು.