ದೇವರಾಣೆ “ಆಪರೇಷನ್ ಕಮಲ’ ಮಾಡುತ್ತಿಲ್ಲ: ಶ್ರೀರಾಮುಲು
Team Udayavani, Dec 6, 2018, 6:15 AM IST
ಮೊಳಕಾಲ್ಮೂರು: ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನಾವು ಆಪರೇಷನ್ ಕಮಲ ಮಾಡುತ್ತಿಲ್ಲಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರಲ್ಲಿ ಭಯ ಹುಟ್ಟಿಸಲು ವಿನಾಕಾರಣ ಬಿಜೆಪಿಯವರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ತಾಕತ್ತಿದ್ದರೆ ತಮ್ಮ ಪಕ್ಷದ ಶಾಸಕರನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಟೀಕೆಗೆ ತಿರುಗೇಟು ನೀಡಿದರು.
ಇಷ್ಟು ದಿನ ಶ್ರೀರಾಮುಲು, ಯಡಿಯೂರಪ್ಪ, ಈಶ್ವರಪ್ಪ ಇನ್ನಿತರ ನಾಯಕರು ಆಪರೇಷನ್ ಕಮಲ ಮಾಡುತ್ತಾರೆ ಎಂದು ಆರೋಪಿಸುತ್ತಿದ್ದರು. ಈಗ ನಮ್ಮ ಸರದಿ ಮುಗಿದಿದ್ದು, ನಮ್ಮ ಆಪ್ತ ಸಹಾಯಕರ ಮೇಲೆ ಆರೋಪ ಮಾಡಲಾಗುತ್ತಿದೆ. ನಮ್ಮ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದನ್ನು ಪಾಲಿಸುತ್ತೇವೆ. ಕುಣಿಯಲು ಆಗಲ್ಲ ಅಂದ್ರೆ ನೆಲ ಡೊಂಕು ಅನ್ನುವ ರೀತಿಯಲ್ಲಿ ನಾಟಕ ಮಾಡಬಾರದು ಎಂದು ಟೀಕಿಸಿದರು.