ನನ್ನ ಬಳಿ ಏನೂ ಇಲ್ಲ: ಹೊರಟ್ಟಿ ಅಸಮಾಧಾನ
Team Udayavani, Dec 18, 2018, 6:00 AM IST
ಬೆಳಗಾವಿ: ಸಚಿವ ಸ್ಥಾನ ಪಡೆದುಕೊಳ್ಳಲು ನನ್ನ ಬಳಿ ಏನೂ ಇಲ್ಲ. ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಅಧಿಕಾರವಿದೆ. ಈಗಿನ ರಾಜಕೀಯ ವ್ಯವಸ್ಥೆಯೇ ಸರಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಸುವರ್ಣ ವಿಧಾನಸೌಧ ಪಕ್ಕದಲ್ಲಿ ಸೋಮವಾರ ನಡೆದ ಪ್ರತಿಭಟನಾ ನಿರತರನ್ನು ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರಕಾರದ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಆಶ್ವಾಸನೆ ನೀಡಿ ಹೋಗಿದ್ದಾರೆ. ಅವರು ಕೇವಲ ಭರವಸೆಗಳಲ್ಲಿಯೇ ಅಧಿಕಾರ ಮುಗಿಸಿದ್ದಾರೆ. ಮಾಜಿ ಸಚಿವೆ ಉಮಾಶ್ರೀ ಆಶ್ವಾಸನೆ ಕೊಟ್ಟು ಹೋದರು. ಇವರು ಮಾಡಿರುವ ಕೆಲಸವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿವೇಶನ ವೇಳೆ ಸದನ ತಪ್ಪಿಸಿ ಮಧ್ಯಪ್ರದೇಶಕ್ಕೆ ಹೋಗಿದ್ದು ತಪ್ಪೇನಿಲ್ಲ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅನೇಕ ಬಾರಿ ಸದನ ತಪ್ಪಿಸಿ ಹೋಗಿದ್ದಾರೆ. ಈ ರೀತಿ ಪದೇಪದೆ ರಿಪೀಟ್ ಆಗಬಾರದು. ಬೆಳಗಾವಿಯಲ್ಲಿ ಅಧಿವೇಶನ ನಿಗದಿತ ಅವಧಿಗಿಂತ ಎರಡು ದಿನ ಹೆಚ್ಚಿಸಿ ಎಂದು ಮನವಿ ಮಾಡಿದರೂ ನನ್ನ ಮಾತು ಯಾರೂ ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.