ಮೋದಿ ‘ಆದರ್ಶ’ ಮರೆತ ಸಂಸದರು!
Team Udayavani, Dec 25, 2018, 6:25 AM IST
ಧಾರವಾಡ: ಗ್ರಾಮಗಳ ಅಭ್ಯುದಯಕ್ಕಾಗಿ ಸಂಸದರ ಮೂಲಕ ಜಾರಿಗೊಳಿಸಿದ್ದ ಪ್ರಧಾನಿ ಮೋದಿ ಅವರ ‘ಸಂಸದರ ಆದರ್ಶ ಗ್ರಾಮ’ ಯೋಜನೆಗೆ ರಾಜ್ಯದಲ್ಲಿ ಭಾರೀ ಹಿನ್ನಡೆಯಾಗಿದೆ. 38 ಗ್ರಾಮಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಬಳ್ಪ ಗ್ರಾಪಂ ತಕ್ಕಮಟ್ಟಿಗೆ ಅಭಿವೃದ್ಧಿ ಕಂಡಿದ್ದು, ಇದೇ ರಾಜ್ಯದ ಮಟ್ಟಿಗೆ ನಂ.1 ಆದರ್ಶ ಗ್ರಾಮ. ಕೇವಲ 4 ಗ್ರಾಮಗಳು ಶೇ.35 ಅಂಕ ಪಡೆದು ಜಸ್ಟ್ ಪಾಸ್ ಆಗಿವೆ. ಈ ಅಂಶವನ್ನು ಧಾರವಾಡದ ಸಿಎಂ ಡಿಆರ್ (ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ಆ್ಯಂಡ್ ರಿಸರ್ಚ್) ಬಯಲು ಮಾಡಿದೆ. ತನ್ನ ಅಧ್ಯಯನ ವರದಿಯನ್ನು ಮುಂದಿನ ತಿಂಗಳು ಕೇಂದ್ರ, ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಲ್ಲಿಸಲಿದೆ.
ಕಟೀಲು ಅವರ ಗ್ರಾಮವೇ ಬೆಸ್ಟ್
ನಳಿನ್ ಕುಮಾರ್ ಕಟೀಲು ಅವರ ಸುಳ್ಯ ತಾಲೂಕಿನ ಬಳ್ಪ ಗ್ರಾ.ಪಂ. ರಾಜ್ಯದಲ್ಲಿ ನಂ.1 ಆದರ್ಶ ಗ್ರಾಮವಾಗಿದ್ದರೆ, ಪ್ರಭಾಕರ ಕೋರೆ ಅವರ ಬೆಳಗಾವಿ ಜಿಲ್ಲೆಯ ಜನವಾಡ ನಂ.2 ಸ್ಥಾನದಲ್ಲಿದೆ. ರಾಮನಗರ ಸಂಸದ ಡಿ.ಕೆ. ಸುರೇಶ್ ಅವರ ಕುಣಿಗಲ್ ತಾಲೂಕಿನ ಮಡಿಕೆಹಳ್ಳಿ ಮತ್ತು ಪ್ರಹ್ಲಾದ್ ಜೋಷಿ ಅವರ ಧಾರವಾಡ ತಾಲೂಕಿನ ಹಾರೋ ಬೆಳವಡಿ ಹಳ್ಳಿಗಳು ಪರವಾಗಿಲ್ಲ ಎನ್ನುವಂತಿವೆ. ಆಯನೂರು ಮಂಜುನಾಥ ಅವರ ತಮದಳ್ಳಿ ಕೊನೆಯ ಸ್ಥಾನದಲ್ಲಿದೆ.
ಪಾಲನೆಯಾಗದ ನಿಯಮ
ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನದ ಬಳಕೆ ಸೇರಿದಂತೆ ಒಟ್ಟು 9 ಅಂಶಗಳ ಮಾನದಂಡದ ಆಧಾರದ ಮೇಲೆ ಜಾರಿಯಾಗಬೇಕಿತ್ತು. ಆದರೆ ರಾಜ್ಯದ 38 ಸಂಸದರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಲ್ಲರೂ ಮೂಲ ಸೌಕರ್ಯಗಳಿಗೆ ಮಾತ್ರ ಒತ್ತು ನೀಡಿದ್ದು, ಸಿಎಂಡಿಆರ್ನ ವರದಿಯಲ್ಲಿ ಉಲ್ಲೇಖವಾಗಿದೆ.
ಕೇಂದ್ರದಿಂದ ಬರುವ ಸಂಸದರ ನಿಧಿ, ಸಿಆರ್ಎಫ್ ಹಣ ಬಳಕೆ, ಸ್ವಯಂ ಸೇವಾ ಸಂಸ್ಥೆಗಳ ಒಳಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಿಯೇ ಇಲ್ಲ. ಹಳ್ಳಿ ಶಾಶ್ವತವಾಗಿ ತನ್ನ ಸಂಪನ್ಮೂಲ ಕ್ರೋಡೀಕರಿಸಿಕೊಂಡು ಸುಸ್ಥಿರ ಗ್ರಾಮವಾಗಿ ರೂಪುಗೊಳ್ಳಲು ಅಗತ್ಯ ಮಾನದಂಡಗಳ ಬಳಕೆ ಆಗಿಲ್ಲ. ಯಾವುದೇ ಆದರ್ಶ ಗ್ರಾಮಗಳ ಪಂಚಾಯತ್ಗಳು ಕೂಡ ಸಮಗ್ರ ಅಭಿವೃದ್ಧಿ ಚಿಂತನೆ ಅಡಿಯಲ್ಲಿ ಕ್ರಿಯಾ ಯೋಜನೆ ರೂಪಿಸದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಅಧ್ಯಯನ ನಡೆದದ್ದು ಹೇಗೆ?
ಸಿಎಂಡಿಆರ್ ಸಂಸ್ಥೆಯ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಪೀಠವು ರಾಜ್ಯದ ಎಲ್ಲ 38 ಸಂಸದರು ಆಯ್ಕೆ ಮಾಡಿಕೊಂಡ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ವಾಸ್ತವ ಅಂಶಗಳನ್ನು ಹೆಕ್ಕಿ ತೆಗೆದಿದೆ. ವಾಸ್ತವಿಕ ಸಂಗತಿಗಳನ್ನು ಅಂಕಿಅಂಶಗಳ ಸಹಿತ ತನ್ನ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಿದೆ. ಸಿಎಂಡಿಆರ್ನ ಹಿರಿಯ ಸಾಮಾಜಿಕ ಸಂಶೋಧಕರಾದ ಡಾ| ನಯನತಾರಾ ನಾಯಕ, ಡಾ| ಶಿವಣ್ಣ, ಡಾ| ನಾರಾಯಣ ಬಿಲ್ಲವ ಸಹಿತ 7ಕ್ಕೂ ಹೆಚ್ಚು ಜನರು ಅಧ್ಯಯನ ತಂಡದಲ್ಲಿದ್ದಾರೆ.
ಪ್ರಧಾನಿ ಮೋದಿ ಅವರ ಪರಿಕಲ್ಪನೆಯ ಆದರ್ಶ ಗ್ರಾಮ ಯೋಜನೆಯಲ್ಲಿ ನಾನು ಆಯ್ಕೆ ಮಾಡಿದ್ದ ಬಳ್ಪ ಗ್ರಾಮ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಂತಸ ತಂದಿದೆ. ಬಳ್ಪ ಗ್ರಾಮಕ್ಕೆ ಸುಮಾರು 25 ಕೋ.ರೂ. ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಯೋಜನೆಗಳು ಅನುಷ್ಠಾನಗೊಳಿಸಲಾಗಿದೆ. ಆದರ್ಶ ಗ್ರಾಮದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರಿಗೂ ಅಭಾರಿಯಾಗಿದ್ದೇನೆ.
– ನಳಿನ್ ಕುಮಾರ್ ಕಟೀಲು, ಸಂಸದರು
ಮಂಗಳೂರು ಸಮೀಪದ ಬಳ್ಪ ಮತ್ತು ಬೆಳಗಾವಿ ತಾಲೂಕಿನ ಜನವಾಡ ಗ್ರಾಮ ಚೆನ್ನಾಗಿ ಅಭಿವೃದ್ಧಿಯಾಗಿವೆ. ಉಳಿದಂತೆ ಯಾವ ಗ್ರಾಮವೂ ಪ್ರಗತಿಯಾಗಿಲ್ಲ.
– ಡಾ| ನಾರಾಯಣ ಬಿಲ್ಲವ, ಸಿಎಂಡಿಆರ್ ಸಂಶೋಧಕ
— ಬಸವರಾಜ ಹೊಂಗಲ್