ಕಷ್ಟ ಹೇಳಿ ಆಟೋ ಕದಿಯುವ ವಂಚಕ
Team Udayavani, Dec 27, 2018, 11:41 AM IST
ಬೆಂಗಳೂರು: ರಾಜಧಾನಿಯ ಆಟೋ ಚಾಲಕರೇ ಎಚ್ಚರ. ಪ್ರಯಾಣಿಕನ ಸೋಗಿನಲ್ಲಿ ಆಟೋ ಹತ್ತಿ, ನಿಮ್ಮ
ಆಟೋದೊಂದಿಗೆ ಪರಾರಿಯಾಗುವ ವಂಚಕನೊಬ್ಬ ನಗರದಲ್ಲಿದ್ದಾನೆ. ಈತನ ಮಾತು ನಂಬಿದ ಮೂವರು ಆಟೋಚಾಲಕರು ತಮ್ಮ ಆಟೋ ಕಳೆದುಕೊಂಡು, ಕಳೆದ ಒಂದು ತಿಂಗಳಿನಿಂದ ಪ್ರತಿ ನಿತ್ಯದ ದುಡಿಮೆ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.
ಆಟೋ ಪಡೆದು ಹಿಂತಿರುಗಿಸದೇ ವಂಚನೆ ಮಾಡಿದ ಅಸ್ಲಂ, ಎಂಬಾತನ ವಿರುದ್ಧ ಕುಮಾರಸ್ವಾಮಿ ಲೇಔಟ್ನಲ್ಲಿ
ಎರಡು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ
ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಅಸ್ಲಂ, ಆಟೋ ಚಾಲಕರಿಂದ ಆಟೋ ಪಡೆದು ವಾಪಾಸ್
ನೀಡದೇ ವಂಚಿಸಿರುವ ಸಂಬಂಧ ಜೈಲು ಸೇರಿದ್ದು, ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿರುವ ಮಾಹಿತಿಯಿದೆ. ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
300 ರೂ. ಕೊಡುತ್ತೇನೆ ಅಂದಿದ್ದ: ಆಟೋ ಚಾಲಕ ತೌಸೀಫ್ ಡಿ.6ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬ್ರಿಗೇಡ್ ರಸ್ತೆಯಲ್ಲಿರುವಾಗ ಬಂದ ಆರೋಪಿ, ಇಲಿಯಾಸ್ ನಗರಕ್ಕೆ ಹೋಗಲಿ, 300 ರೂ. ಬಾಡಿಗೆ ಮಾತನಾಡಿ ತೌಸೀಫ್ ಅವರನ್ನು ಕರೆದುಕೊಂಡು ಹೋಗುವಾಗ, ತನ್ನ ಪರಿಚಯ ಮಾಡಿಕೊಂಡ ಅಸ್ಲಂ, ಮಾತಿನ ಮಧ್ಯೆ, ತನ್ನ ಅಣ್ಣನಿಗೆ ಫೋನ್ ಮಾಡಬೇಕು ಎಂದು ಹೇಳಿ ತೌಸೀಫ್ ಪೋನ್ನಿಂದಲೇ ಮಾತನಾಡಿದ್ದಾನೆ. ಇದಾದ ಬಳಿಕ ಬನಶಂಕರಿ ಮೆಟ್ರೋ ನಿಲ್ದಾಣಕ್ಕೆ ಬಂದ ಕೂಡಲೇ, ನಿಮ್ಮ ಆಟೋ ಕೊಡಿ ನಾನು ನಮ್ಮ ಅಣ್ಣನ ಬಳಿ ಹಣ ಪಡೆದುಕೊಂಡು ವಾಪಸ್ ಬರುತ್ತೇನೆ ಎಂದು ನಂಬಿಸಿ ತೌಸೀಫ್ರಿಂದ ಆಟೋ ಪಡೆದು ಹೋಗಿ ಪರಾರಿಯಾಗಿದ್ದಾನೆ.
ತನ್ನ ಆಟೋಗಾಗಿ ಹಲವು ಕಡೆ ಹುಡುಕಾಟ ನಡೆಸಿದ ತೌಸೀಫ್, ಸಿಗದಿದ್ದಾಗ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಷ್ಟ ಎಂದು ಹೇಳಿಕೊಂಡ ವಂಚಕನ ಮಾತನ್ನು ನಂಬಿ ಆಟೋ ನೀಡಿದೆ. ಆದರೆ ಆತ ವಾಪಸ್ ಬರಲೇ ಇಲ್ಲ. ಆಟೋ ಮಾಲೀಕರ ಬಳಿ ಆಟೋ ಪಡೆದು ನಾನು ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದೆ. ಇದೀಗ ಆಟೋ ಇಲ್ಲದಂತಾಯಿತು. ಆತನ ವಿರುದ್ಧ ದೂರು ನೀಡಿದ ಬಳಿಕ, ಆತ ಇದೇ ರೀತಿ ಹಲವರಿಗೆ ವಂಚಿಸಿರುವುದು ಗೊತ್ತಾಯಿತು ಎಂದು ದೂರುದಾರ ತೌಸೀಫ್ ಹೇಳಿದ್ದಾರೆ.