ಮೈಸೂರು ಜಿಪಂನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಖತಂ
Team Udayavani, Feb 24, 2019, 1:45 AM IST
ಮೈಸೂರು: ಮೈಸೂರು ಜಿಪಂ ಅಧ್ಯಕ್ಷರಾಗಿ ಜೆಡಿಎಸ್ನ ಬಿ.ಸಿ.ಪರಿಮಳಾ ಶ್ಯಾಮ್, ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಎಂ.ವಿ.ಗೌರಮ್ಮ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗ್ಗೆ 8 ರಿಂದ 10ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಈ ಅವಧಿಯಲ್ಲಿ ಈ ಹಿಂದೆಯೇ ನಿರ್ಧಾರವಾಗಿದ್ದಂತೆ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಜಿಪಂ ಕ್ಷೇತ್ರದ ಜೆಡಿಎಸ್ ಸದಸ್ಯೆ ಬಿ.ಸಿ.ಪರಿಮಳಾ ಶ್ಯಾಮ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಎರಡು ಸೆಟ್ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ನವರು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಬೆಳಗ್ಗೆ ನಿರ್ಧರಿಸಿದ್ದರಿಂದ ನಾಮಪತ್ರ ಸಲ್ಲಿಕೆಗೆ ಹತ್ತು ನಿಮಿಷಗಳ ಕಾಲಾವಕಾಶ ಇದ್ದಾಗ ಹುಣಸೂರು ತಾಲೂಕು ಬಿಳಿಕೆರೆ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಎಂ.ವಿ.ಗೌರಮ್ಮ ಸೋಮಶೇಖರ್ ಸ್ಪರ್ಧೆ ಬಯಸಿ ಎರಡು ಸೆಟ್ ನಾಮಪತ್ರ ಸಲ್ಲಿಸಿದರು. ಜೆಡಿಎಸ್ನವರು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ಜತೆ ಕೈಜೋಡಿಸಿ ದ್ದರಿಂದ ಉಪಾಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಇಲ್ಲದಿದ್ದರೂ ನಾಮಪತ್ರ ಸಲ್ಲಿಕೆಗೆ ಇನ್ನು ಕೇವಲ 2 ನಿಮಿಷಗಳ ಕಾಲಾ ವಕಾಶ ಇದ್ದಾಗ ನಂಜನಗೂಡು ತಾಲೂಕು ಹದಿನಾರು ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಎ.ಎಂ. ಗುರುಸ್ವಾಮಿ ನಾಮಪತ್ರ ಸಲ್ಲಿಸಿ, ವಾಪಸ್ ಪಡೆದರು. ಅಂತಿಮವಾಗಿ ಕಣದಲ್ಲಿ ಒಬ್ಬರೇ ಉಳಿದಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ವಿ.ಗೌರಮ್ಮ ಸೋಮಶೇಖರ್ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು.