ಉಡುಪಿ ಸುವರ್ಣಗೋಪುರ: ನಾಳೆ ಕಾಮಗಾರಿ ಆರಂಭ
Team Udayavani, Nov 27, 2018, 10:14 AM IST
ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡು ಹೊದೆಸುವ ಕಾರ್ಯಕ್ಕೆ ನ. 28ರಂದು ಬೆಳಗ್ಗೆ 7.30ಕ್ಕೆ ಚಾಲನೆ ನೀಡಲಾಗುವುದು. ಈ ಸಂದರ್ಭ ಉಡುಪಿಯ ಮಠಾಧೀಶರು ಮತ್ತು ಇತರ ಮಠಾಧೀಶರು, ಸಚಿವೆ ಜಯಮಾಲಾ, ಶಾಸಕ ಕೆ. ರಘುಪತಿ ಭಟ್, ಕರ್ನಾಟಕ ಜುವೆಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎ. ಶರವಣ, ಹೊಸಪೇಟೆಯ ಕೈಗಾರಿಕೋದ್ಯಮಿ ಪತ್ತಿಕೊಂಡ ಪ್ರಭಾಕರ್, ರಾಜ್ಯ ಜುವೆಲರ್ಸ್ ಅಸೋಸಿಯೇಶನ್ ಫೆಡರೇಶನ್ ಚೇರ್ಮನ್ ಜಯ ಆಚಾರ್ಯ ಮೊದಲಾದವರು ಉಪಸ್ಥಿತರಿರುವರು.
ವಿಶ್ವಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಕೈಗೊಂಡಿರುವ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪ್ರಮುಖ ಯೋಜನೆ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರದ ಸಮರ್ಪಣೆಯಾಗಿದೆ.
ಈ ಮಹತ್ತರ ಯೋಜನೆಗೆ ಒಟ್ಟು 100 ಕೆ.ಜಿ ಬಂಗಾರದ ಅಗತ್ಯವಿದೆ. ಈಗಾಗಲೇ ಭಕ್ತರಿಂದ ಸುಮಾರು 60 ಕೆ.ಜಿ.ಗಿಂತ ಹೆಚ್ಚು ಬಂಗಾರ ಸಂಗ್ರಹವಾಗಿದೆ. 11 ಕೋ.ರೂ. ನಗದಿನ ರೂಪದಲ್ಲಿ, 25 ಕೆ.ಜಿ. ಚಿನ್ನದ ರೂಪದಲ್ಲಿ ಬಂದಿದೆ. ಇನ್ನು ಸುಮಾರು 40 ಕೆ.ಜಿ. ಚಿನ್ನದ ಅಗತ್ಯವಿದ್ದು ಭಕ್ತರು ಯಥಾಶಕ್ತಿ ನೀಡಿದ ಕಾಣಿಕೆಯನ್ನು ಯೋಜನೆಗಾಗಿ ಬಳಸಲಾಗುತ್ತಿದೆ. ಸುಮಾರು 32 ಕೋ.ರೂ.ಗಳ ಯೋಜನೆ ಇದಾಗಿದ್ದು ಶ್ರೀಕೃಷ್ಣ ಮಠದ ಗರ್ಭಗುಡಿಯ ಒಟ್ಟು ವಿಸ್ತೀರ್ಣ ಸುಮಾರು 2,500 ಚದರಡಿ ಮೇಲ್ಛಾವಣಿಗೆ ಚಿನ್ನದ ತಗಡನ್ನು ಮಡಾಯಿಸಲಾಗುವುದು. ಈ ಹಿಂದೆ ತಾಮ್ರದ ತಗಡಿನ ಮೇಲೆ ಚಿನ್ನದ ತಗಡನ್ನು ಹೊದೆಸುವ ಯೋಜನೆಯಾಗಿತ್ತಾದರೂ ಪ್ರಸ್ತುತ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಮಡಾಯಿಸಲು ಉದ್ದೇಶಿಸಲಾಗಿದೆ. ಬೆಳ್ಳಿಯ ತಗಡಿಗೆ 500 ಕೆ.ಜಿ. ಬೆಳ್ಳಿಯ ಅಗತ್ಯವಿದೆ. ಗರಿಷ್ಠ ಪ್ರಮಾಣದ ಚಿನ್ನದ ಬಳಕೆಯಾಗಬೇಕೆಂಬ ಉದ್ದೇಶದಿಂದ ಈ ಮಾರ್ಪಾಟನ್ನು ಮಾಡಲಾಗಿದೆ ಎಂದು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸುದ್ದಿಗಾರರಿಗೆ ತಿಳಿಸಿದರು. ಚಿನ್ನದ ಗೋಪುರಕ್ಕೆ ಹೆಚ್ಚಿನ ಆಕರ್ಷಣೆಯ ಉದ್ದೇಶದಿಂದ ಕರಾವಳಿಯ ಸಂಸ್ಕೃತಿ ಎನಿಸಿದ ಹಂಚಿನ ಆಕೃತಿಯನ್ನು ರೂಪಿಸಲಾಗುವುದು ಎಂದರು.
ಗೋಪುರದ ಮೇಲೆ ಸರ್ವಮೂಲಗ್ರಂಥ
ಈ ಸುವರ್ಣ ಗೋಪುರದ ತಗಡಿನಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ “ಸರ್ವಮೂಲ ಗ್ರಂಥಗಳನ್ನು’ ಬರೆಸಲಾಗುವುದು. ಎಲ್ಲ ಸಂಕಷ್ಟಗಳನ್ನು ಪರಿಹರಿಸಿ ಐಹಿಕ ಮತ್ತು ಪಾರತ್ರಿಕ ಆನಂದವನ್ನು ಕೊಡುವ ಈ ಗ್ರಂಥಗಳನ್ನು ಲಿಪಿಬದ್ಧಗೊಳಿಸಿರುವ ಕೀರ್ತಿ ಶ್ರೀ ಪಲಿಮಾರು ಮಠದ ಮೂಲ ಯತಿಗಳಾದ ಶ್ರೀ ಹೃಷೀಕೇಶ ತೀರ್ಥರಿಗೆ ಸಲ್ಲುತ್ತದೆ. ಈ ಮೂಲಕೃತಿಯು ಇಂದಿಗೂ ಮಠದಲ್ಲಿ ಪೂಜೆಗೊಳ್ಳುತ್ತಿದೆ. ಇದು ಶ್ರೀಮನ್ಮಧ್ವಾಚಾರ್ಯರ ಪ್ರತಿರೂಪ ಎನಿಸಿದೆ. ಇಂತಹ ಮಹತ್ವದ ಕೃತಿಯನ್ನು ಶ್ರೀಕೃಷ್ಣ ಮಠದ ಚಿನ್ನದ ಗೋಪುರದಲ್ಲಿ ಬರೆಸುವುದು ಐತಿಹಾಸಿಕ ಕಾರ್ಯವೆನಿಸಿದೆ.
ಮೇಲ್ಛಾವಣಿಯಲ್ಲಿ ಹಂಸಮಂತ್ರ
ಶ್ರೀಕೃಷ್ಣ-ಮುಖ್ಯಪ್ರಾಣರ ನಿರಂತರ ಪರಮೋಪಕಾರದ ಸ್ಮರಣೆ ಹಾಗೂ ಕೃತಜ್ಞತಾರ್ಪಣೆಗೆ ಸಂಕೇತವಾಗಿ 21,600 ಬಾರಿ ಹಂಸಮಂತ್ರವನ್ನು ಗರ್ಭಗುಡಿಯ ಮೇಲ್ಛಾವಣಿಯಲ್ಲಿ ದಾಖಲಿಸಲಾಗುವುದು. ಗರ್ಭಗುಡಿಯೊಳಗೆ ಕಂಗೊಳಿಸುವ ಶ್ರೀಕೃಷ್ಣ ಪರಬ್ರಹ್ಮನೇ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವ ಸ್ವಾಮಿ. ಅವನ ಜತೆಯಲ್ಲಿ ಸಮಸ್ತ ಜೀವರ ನಿಯಾಮಕರಾಗಿರುವ ಶ್ರೀಮುಖ್ಯಪ್ರಾಣ ದೇವರು 21,600 ಬಾರಿ ಹಂಸಮಂತ್ರವನ್ನು ಜಪಿಸುತ್ತಾ ನೆಲೆಸಿರುವರು. ಈ ಶ್ವಾಸೋಚ್ಛಾಸವು ದಿನಕ್ಕೆ 21,600 ಬಾರಿ ನಡೆಯುವುದು ವೈಜ್ಞಾನಿಕ ಸತ್ಯ. ಈ ಎಲ್ಲ ಅನುಸಂಧಾನದಿಂದ ಶ್ರೀಕೃಷ್ಣನ ಗರ್ಭಗುಡಿಗೆ ಪ್ರದಕ್ಷಿಣೆ ಬರುವ ಭಕ್ತರ ಸಕಲಾನಿಷ್ಟ ನಿವೃತ್ತಿಯೊಂದಿಗೆ ಸಕಲಾಭೀಷ್ಟ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ. ದೇಶದ ಒಳಿತಿಗಾಗಿ ದೇಗುಲವಿದ್ದರೆ, ದೇಗುಲದ ಒಳಿತಿಗಾಗಿ ಗೋಪುರವಿರುತ್ತದೆ. ಇದು ಆಡಂಬರದ ವಸ್ತುವಾಗಿರದೆ ಆಧ್ಯಾತ್ಮಿಕ ವಿಚಾರಧಾರೆಯ ಹಿನ್ನೆಲೆ ಇದೆ ಎಂದು ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಹೇಳಿದರು.
ಕನಕ ಜಯಂತಿಯಂದು ಕನಕನ ಸ್ಮರಣೆ
ಕನಕನಿಗೆ ಒಡೆಯ ಕನಕದಾಸರು. ಕನಕವೇ ಅವರ ದಾಸರಾದ ನೆಲೆಯಲ್ಲಿ ಕನಕದಾಸರೆನಿಸಿದರು. ಈ ದಿನದಂದು ಸುವರ್ಣಗೋಪುರದ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಶ್ರೀ ವಿದ್ಯಾಧೀಶತೀರ್ಥರು ತಿಳಿಸಿದರು.
ಕಾಮಗಾರಿ ವೀಕ್ಷಣೆಗೆ ಅವಕಾಶ
ಸುವರ್ಣ ಗೋಪುರದ ಕಾಮಗಾರಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಶ್ರೀಕೃಷ್ಣ ಮಠದ ಗೋಶಾಲೆಯ ಮುಂದೆ ಯಾಗಶಾಲೆ ಸಮೀಪ ನಡೆಸಲಾಗುವುದು. ಬಂಗಾರದ ಕೆಲಸದಲ್ಲಿ ನಿಷ್ಣಾತರಾದ ದೈವಜ್ಞ ಸಮಾಜ ಹಾಗೂ ವಿಶ್ವಕರ್ಮ ಸಮಾಜದ ಕುಶಲಕರ್ಮಿಗಳ ಸಹಕಾರದೊಂದಿಗೆ ಸುವರ್ಣ ಗೋಪುರದ ನಿರ್ಮಾಣದ ಯೋಜನೆಯನ್ನು ನಡೆಸಲಾಗುವುದು. ಇದರಲ್ಲಿ ಮರದ ಕೆಲಸ, ಬೆಳ್ಳಿ ಹಾಗೂ ಬಂಗಾರದ ಕೆಲಸವೂ ಇರುವುದರಿಂದ ಈ ಎರಡೂ ಸಮಾಜದ ಕುಶಲಕರ್ಮಿಗಳೂ ಕಾರ್ಯನಿರ್ವಹಿಸಲಿದ್ದಾರೆ. ಪ್ರಗತಿ ಅಸೋಸಿಯೇಟ್ಸ್ನ ಯು. ವೆಂಕಟೇಶ ಶೇಟ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್