ದೀಪಾವಳಿ ಸಡಗರದ ಮೇಲೆ ಮರಳು ಕೊರತೆಯ ಹೊಡೆತ
Team Udayavani, Nov 6, 2018, 8:39 AM IST
ಉಡುಪಿ: ಮರಳುಗಾರಿಕೆ ನಡೆಯದ ಕಾರಣ ಇದು ಈ ಬಾರಿಯ ದೀಪಾವಳಿಯ ಮೇಲೂ ಪರಿಣಾಮ ಬೀರುವ ಲಕ್ಷಣ ಇದೆ.
ಮಳೆಗಾಲ ಆರಂಭವಾದ ಬಳಿಕ ಕುಂದುವ ಮಾರುಕಟ್ಟೆ ಚಟುವಟಿಕೆ ಸಾಮಾನ್ಯವಾಗಿ ದೀಪಾವಳಿಯ ಹೊತ್ತಿಗೆ ಮತ್ತೆ ಚಿಗುರುತ್ತದೆ. ಆದರೆ ಈ ಬಾರಿ ದೀಪಾವಳಿ ಹಬ್ಬಕ್ಕೆ ಇದುವರೆಗೆ ಈ ಹಿಂದಿನಂತೆ ಮಾರುಕಟ್ಟೆ ಚೈತನ್ಯ ಪಡೆದಿಲ್ಲ.
ಕರಾವಳಿಯಲ್ಲಿ ಉತ್ತರ ಕರ್ನಾಟಕ, ತಮಿಳುನಾಡು, ಉತ್ತರ ಭಾರತದ ಸಾವಿರಾರು ಕಾರ್ಮಿಕರಿದ್ದಾರೆ. ಇವರಲ್ಲದೆ ಸ್ಥಳೀಯ ಮೇಸ್ತ್ರಿಗಳು, ಕಾರ್ಮಿಕರೂ ಇದ್ದಾರೆ. ಮರಳು ತೆಗೆಯುವ ಉತ್ತರ ಭಾರತದ ಕಾರ್ಮಿಕರೂ ದೊಡ್ಡ ಸಂಖ್ಯೆಯಲ್ಲಿ ಇರುತ್ತಿದ್ದರು. ಇವರೂ ಈಗ ಕೆಲಸವಿಲ್ಲದೆ ಬೇರೆಡೆ ಹೋಗಿದ್ದಾರೆ. ಮಳೆಗಾಲದಲ್ಲಿ ಸಹಜವಾಗಿ ಕೆಲಸ ಕಡಿಮೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವುದು ಕಡಿಮೆ. ಈಗಾಗಲೇ ಮರಳುಗಾರಿಕೆ ಆರಂಭಗೊಂಡಿದ್ದರೆ ಕಟ್ಟಡಗಳ ಕೆಲಸಕ್ಕೆ ಚುರುಕು ಸಿಗುತ್ತಿತ್ತು. ಈ ಬಾರಿ ಇನ್ನೂ ಆರಂಭವಾಗದ ಕಾರಣ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಊರುಗಳಿಗೆ ವಲಸೆ ಹೋಗಿದ್ದಾರೆ. ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಅವಲಂಬಿಸಿರುವ ದೊಡ್ಡ ಸಂಖ್ಯೆಯ ಎಂಜಿನಿಯರ್, ವಾಹನ ಮಾಲಕರು, ಚಾಲಕರು ಕೂಡ ಕೈಕಟ್ಟಿ ಹೋದ ಸ್ಥಿತಿಯಲ್ಲಿದ್ದಾರೆ.
1,000 ಚದರಡಿಯ ಕಟ್ಟಡದ ಒಟ್ಟು ವೆಚ್ಚ 25 ಲ.ರೂ., ಇದರಲ್ಲಿ ಹೊಯಿಗೆ ಖರ್ಚು ಸುಮಾರು 1.8 ಲ.ರೂ., ಅಂದರೆ ಸುಮಾರು ಶೇ.10 ಹೊಯಿಗೆಗೆ ಖರ್ಚಾದರೆ ಉಳಿದ ಶೇ.90ರಷ್ಟು ಭಾಗ ಟೈಲ್ಸ್, ಎಲೆಕ್ಟ್ರಿಫಿಕೇಶನ್, ಸ್ಯಾನಿಟರಿ, ಪ್ಲಂಬಿಂಗ್, ಜಲ್ಲಿ, ಕೆಂಪುಕಲ್ಲು, ಹಾರ್ಡ್ವೇರ್, ಪೇಂಟ್ಗಳಿಗೆ ಖರ್ಚಾಗುತ್ತದೆ. ಕೇವಲ ಶೇ.10ರಷ್ಟು ವೆಚ್ಚವಾಗುವ ಹೊಯಿಗೆ ಸರಬರಾಜು ಆಗದ ಕಾರಣಉಳಿದ ಶೇ.90 ಭಾಗದ ಉದ್ಯಮ ಸ್ಥಗಿತಗೊಂಡಿದೆ. ಕಟ್ಟಡ ಕಟ್ಟುವಲ್ಲಿಗೆ ಚಹಾ, ತಿಂಡಿ ಸರಬರಾಜು ಮಾಡುವ ಸಾಮಾನ್ಯ ಹೊಟೇಲ್ನವರಿಂದ ಹಿಡಿದು ಮಧ್ಯಮ, ದೊಡ್ಡ ಮಟ್ಟದ ಹೊಟೇಲ್ಗಳವರೆಗೂ ಇದು ಪರಿಣಾಮ ಬೀರಿದೆ. ಇತ್ತೀಚೆಗೆ ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಗ್ಯಾರೇಜ್ ಮಾಲಕರೂ ಪಾಲ್ಗೊಂಡಿದ್ದರು. ಹೊಯಿಗೆ ಸಾಗಾಟವಿಲ್ಲದೆ ವಾಹನಗಳೂ ಗ್ಯಾರೇಜ್ ಕಡೆ ಮುಖ ಹಾಕದಿರುವುದು ಇದಕ್ಕೆ ಕಾರಣ.
ದೀಪಾವಳಿಗೆ ಸಿರಿವಂತರಿಗಿಂತ ಕಾರ್ಮಿಕರೇ ಖರ್ಚು ಮಾಡುವುದು ಹೆಚ್ಚು. ಕಾರ್ಮಿಕರಿಗೆ ದೀಪಾವಳಿ ಬೋನಸ್ ಸಿಗುವುದಿದೆ. ಈ ಹಣ ಪೂರ್ತಿ ಹಬ್ಬಕ್ಕಾಗಿ ಖರ್ಚು ಮಾಡುವ ಪ್ರವೃತ್ತಿ ಅವರದು. ಈಗ ಕೆಲಸವೇ ಇಲ್ಲದ ಕಾರಣ ಬೋನಸ್ ಸಿಗುವ ಪ್ರಶ್ನೆ ಇಲ್ಲ. ಈ ಹಣ ವ್ಯಾಪಾರ ವಹಿವಾಟಿಗೆ ವಿನಿಯೋಗಿಸಿದಾಗ ವ್ಯಾಪಾರ ಚಟುವಟಿಕೆ ಸಕ್ರಿಯವಾಗುತ್ತದೆ. ಕಾರ್ಮಿಕರು ಖರ್ಚು ಮಾಡದೆ ಇರುವುದರಿಂದ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಆರ್ಥಿಕವಾಗಿ ಸಶಕ್ತರಾಗಿರುವವರೂ ಮರಳು ಅಲಭ್ಯತೆಯಿಂದಾಗಿ ಮನೆಗಳ ನಿರ್ಮಾಣವನ್ನು ಮೊಟಕು
ಗೊಳಿಸಿದ್ದಾರೆ. ಇವರಿಗೂ ಸಾಲ ಸರಿಯಾಗಿ ಬಳಸಲಾಗುತ್ತಿಲ್ಲ. ಇದು ಹಣಕಾಸು ಸಂಸ್ಥೆಗಳ ಮೇಲೂ ಪರಿಣಾಮ ಬೀರುತ್ತಿದೆ.
ನಿರ್ಮಾಣ ಕ್ಷೇತ್ರಕ್ಕೆ ದೀಪಾವಳಿ ದೊಡ್ಡ ಹಬ್ಬ. ಸಾಮಾನ್ಯ ಕಾರ್ಮಿಕರಿಂದ ಹಿಡಿದು ಎಂಜಿನಿಯರ್ಗಳು, ಬೇರೆ ಬೇರೆ ಶ್ರೇಣಿಯ ಕಾರ್ಮಿಕರಿಗೆ ಕೆಲಸವಿಲ್ಲವಾಗಿದೆ. ಇದರಿಂದ ಇದಕ್ಕೆ ಸಂಬಂಧಿಸಿದ ಇತರ ಉದ್ಯಮಗಳೂ ಸಂಕಷ್ಟ ಅನುಭವಿಸುತ್ತಿವೆ. ಆದ್ದರಿಂದ ಈ ಬಾರಿ ದೀಪಾವಳಿ ಸಡಗರಕ್ಕೆ ಹೊಡೆತ ಬೀಳಲಿದೆ.
ಗೋಪಾಲ ಭಟ್, ಅಧ್ಯಕ್ಷರು, ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ ಅಸೋಸಿಯೇಶನ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ