BJP Candidates;ತಿರುವನಂತಪುರಂನಿಂದ ರಾಜೀವ್ ಚಂದ್ರಶೇಖರ್: ಬಾನ್ಸುರಿಗೆ ಟಿಕೆಟ್
ಕೇರಳದಲ್ಲಿ ಕುತೂಹಲ ಕೆರಳಿಸಿದ ಕೇಂದ್ರ ಸಚಿವರ ಸ್ಪರ್ಧೆ...
Team Udayavani, Mar 2, 2024, 7:02 PM IST
ಹೊಸದಿಲ್ಲಿ: ಬಿಜೆಪಿಯ ಬಹು ನಿರೀಕ್ಷಿತ 195 ಅಭ್ಯರ್ಥಿಗಳ ಮೊದಲ ಪಟ್ಟಿ ಶನಿವಾರ ಸಂಜೆ ಬಿಡುಗಡೆ ಮಾಡಲಾಗಿದೆ. 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಗುಜರಾತ್ನ 15 ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರದಿಂದ ಮತ್ತು ಮನ್ಸುಖ್ ಮಾಂಡವಿಯಾ ಪೋರಬಂದರ್ ನಿಂದ ಸ್ಪರ್ಧಿಸಲಿದ್ದಾರೆ.
ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿಧಿಶಾದಿಂದ ಸ್ಪರ್ಧಿಸಲಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ಗುನಾದಿಂದ ಸ್ಪರ್ಧಿಸಲಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ, ಬಿಜೆಪಿ ಸಂಸದ ಬಿಷ್ಣು ಪಾದ್ ರಾಯ್ ಅಂಡಮಾನ್ ಮತ್ತು ನಿಕೋಬಾರ್ನಿಂದ, ಬಿಜೆಪಿ ಸಂಸದ ತಾಪಿರ್ ಗಾವೊ ಅರುಣಾಚಲ ಪೂರ್ವದಿಂದ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ದಿಬ್ರುಗಢದಿಂದ ಸ್ಪರ್ಧಿಸಲಿದ್ದಾರೆ.
ಕೇರಳದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ಅಟ್ಟಿಂಗಲ್ನಿಂದ ಸ್ಪರ್ಧಿಸಲಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂನಿಂದ ಸ್ಪರ್ಧಿಸಲಿದ್ದಾರೆ.
ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಮಧ್ಯಪ್ರದೇಶದ ಭೋಪಾಲ್ ನಿಂದ ಬಿಜೆಪಿ ನಾಯಕ ಅಲೋಕ್ ಶರ್ಮ ಸ್ಪರ್ಧಿಸಲಿದ್ದಾರೆ.
ದೆಹಲಿಯ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ನವದೆಹಲಿ ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ. ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ, ಪಶ್ಚಿಮ ದೆಹಲಿಯಿಂದ ಕಮಲ್ಜೀತ್ ಸೆಹ್ರಾವತ್, ದಕ್ಷಿಣ ದೆಹಲಿಯಿಂದ ರಾಮ್ವೀರ್ ಸಿಂಗ್ ಬಿಧುರಿ ಮತ್ತು ದೆಹಲಿ ಚಾಂದಿನಿ ಚೌಕ್ ನಿಂದ ಪ್ರವೀಣ್ ಖಂಡೇಲ್ವಾಲ್ ಅಭ್ಯರ್ಥಿಗಳಾಗಿದ್ದಾರೆ.
ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳದಿಂದ 20, ಮಧ್ಯಪ್ರದೇಶದಿಂದ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15, ಕೇರಳದಿಂದ 12, ತೆಲಂಗಾಣದಿಂದ 9, ಅಸ್ಸಾಂನಿಂದ 11, ಜಾರ್ಖಂಡ್ ಮತ್ತು ಛತ್ತೀಸ್ಗಢದಿಂದ ತಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ದೆಹಲಿಯಿಂದ 5, ಜಮ್ಮು ಮತ್ತು ಕಾಶ್ಮೀರ 2, ಉತ್ತರಾಖಂಡದಿಂದ 3, ಅರುಣಾಚಲ ಪ್ರದೇಶದಿಂದ 2 ಮತ್ತು ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್, ದಮನ್ ಮತ್ತು ದಿಯುನಿಂದ ತಲಾ 1 ಕ್ಷೇತ್ರಗಳಿಗೆ ಅಭ್ಯರ್ಥಿ ಗಳ ಹೆಸರು ಘೋಷಿಸಲಾಗಿದೆ.