ಕರಾವಳಿ ಕನ್ನಡಿಗರೊಂದಿಗೆ ಡಿವಿಎಸ್ ಸಭೆ
Team Udayavani, Mar 25, 2019, 11:03 AM IST
ಬೆಂಗಳೂರು: ಕರಾವಳಿಗರಲ್ಲಿ ವಿದ್ಯೆ, ಬುದ್ಧಿ, ಸಂಸ್ಕೃತಿ ಎಲ್ಲವೂ ಇದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೇವೆ. ರಾಜಧಾನಿ ನಮ್ಮ ಕೈಹಿಡಿದಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ವಾಸವಾಗಿರುವ ಕರಾವಳಿ ಭಾಗದ ಕನ್ನಡಗಿರ ಸಭೆ ಭಾನುವಾರ ಯಶವಂತಪುರದ ಮೇವಾರ ಭವನದಲ್ಲಿ ನಡೆಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆಯೂ ಭರದ ಪ್ರಚಾರ ಆರಂಭವಾಗಿದೆ.
ಪ್ರತಿ ವಾರ್ಡ್ನಲ್ಲೂ ಸಭೆ ನಡೆಸುತ್ತಿದ್ದೇವೆ. ಹಾಗೆಯೇ ವಿವಿಧ ಸಮುದಾಯ, ಸಂಘಟನೆಗಳ ಸಭೆಯನ್ನು ಕರೆಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಕನ್ನಡಿಗರ ಸಭೆ ಕರೆಯಲಾಗಿದೆ ಎಂದು ಹೇಳಿದರು. ಕರಾವಳಿಯಲ್ಲಿ ಉದ್ಯೋಗಾವಕಾಶದ ಕೊರತೆ ಇದೆ.
ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಕಾರಣ. ಅಲ್ಲಿಂದ ಬೆಂಗಳೂರಿಗೆ ವಲಸೆ ಬಂದಿರುವವರಿಗೆ ಇಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ. ಬೆಂಗಳೂರು ನಮ್ಮ ಮನೆಯಂತಾಗಿದೆ. ಕ್ಷೇತ್ರದ ಸಂಸದನಾಗಿ ಸಸದಾ ನಿಮ್ಮೊಂದಿಗೆ ಇರಲಿದ್ದೇನೆ.
ನಿಮ್ಮ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ ಎಂದರು. ಸಾಹಿತಿ ಡಾ.ಕೆ.ಪಿ.ಪುತ್ತೂರಾಯ, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಮಾಜಿ ಉಪಮೇಯರ್ ಎಸ್. ಹರೀಶ್, ಉದಯ ಧರ್ಮಸ್ಥಳ ಮೊದಲಾದವರು ಇದ್ದರು.