ಕಾಂಗ್ರೆಸ್ ಸಹಕಾರ ಕೋರಿದ ಸಚಿವ ಪ್ರಹ್ಲಾದ್ ಜೋಶಿ
Team Udayavani, Jun 8, 2019, 6:00 AM IST
ನವದೆಹಲಿ: 17ರಿಂದ ಆರಂಭವಾಗುವ ಸಂಸತ್ ಅಧಿವೇಶನಕ್ಕೆ ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರ ಕಾಂಗ್ರೆಸ್ಗೆ ಮನವಿ ಮಾಡಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ನೆರವು ಕೋರಿದ್ದಾರೆ. ‘ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕಿ ಜತೆಗೆ ಭೇಟಿಯಾಗಿ ಚರ್ಚಿಸಲಾಯಿತು. ಸೌಹಾರ್ದ ವಾತಾವರಣದಲ್ಲಿ ಮಾತುಕತೆ ನಡೆಯಿತು. ಸುಸೂತ್ರ ಕಲಾಪ ನಿಟ್ಟಿನಲ್ಲಿ ಅವರ ನೆರವು ಕೋರಿದೆವು. ಪ್ರತಿಪಕ್ಷಗಳಿಗೆ ಸರ್ಕಾರದ ವತಿಯಿಂದಲೂ ಸಹಕಾರ ನೀಡಬೇಕು ಎಂದು ಸೋನಿಯಾ ಕೇಳಿಕೊಂಡಿದ್ದಾರೆ’ ಎಂದು ಭೇಟಿ ಬಳಿಕ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.