ಹತ್ರಾಸ್ ಸಂತ್ರಸ್ಥೆ ಮತ್ತು ಆರೋಪಿ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು: ಉ.ಪ್ರ ಪೊಲೀಸರು
Team Udayavani, Oct 7, 2020, 8:07 AM IST
ಉತ್ತರಪ್ರದೇಶ: ಹತ್ರಾಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅತ್ಯಾಚಾರ ಮತ್ತು ಮಾರಣಾಂತಿಕವಾಗಿ ಹಲ್ಲೆಗೊಳಗಾದ 19 ವರ್ಷದ ಯುವತಿ ಪ್ರಕರಣದ ಮುಖ್ಯ ಆರೋಪಿಗಳೊಂದಿಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದಳು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಮತ್ತು ಹಲ್ಲೆಗೊಳಗಾದ ಯುವತಿಯು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಅದೇ ಗ್ರಾಮದ ಸಂದೀಪ್ ಸಿಂಗ್ ಮುಖ್ಯ ಆರೋಪಿಯಾಗಿದ್ದ.
ಇದೀಗ ಸಂತ್ರಸ್ತೆಯ ಕುಟುಂಬ ಮತ್ತು ಮುಖ್ಯ ಆರೋಪಿ ಸಂದೀಪ್ ಸಿಂಗ್ ಫೋನ್ ಟ್ರ್ಯಾಕ್ ಮಾಡಿರುವ ಪೊಲೀಸರು, ಮುಖ್ಯ ಆರೋಪಿಯು ಯುವತಿಯೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯ ಸಹೋದರನ ಹೆಸರಿನಲ್ಲಿ ಸಂದೀಪ್ ಗೆ ಒಂದು ಫೋನ್ ಸಂಖ್ಯೆಯಿಂದ ನಿಯಮಿತವಾಗಿ ಕರೆಗಳು ಬರುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಸಂತ್ರಸ್ಥೆಯ ಹಳ್ಳಿಯಾದ ಬೂಲ್ಗಾಹಿಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಚಂದಪಾ ಪ್ರದೇಶದಲ್ಲಿರುವ ಸೆಲ್ ಟವರ್ಗಳಿಂದ ಹೆಚ್ಚಿನ ಕರೆಗಳನ್ನು ಮಾಡಲಾಗಿದೆ
ಇದನ್ನೂ ಓದಿ: ದಲಿತ ಶಾಸಕನ ಜತೆ ಪುತ್ರಿಯ ಮದುವೆ; ತಂದೆಯಿಂದ ಆತ್ಮಹತ್ಯೆಗೆ ಯತ್ನ
ಎರಡು ಫೋನ್ ಸಂಖ್ಯೆಗಳ ನಡುವೆ 62 ಔಟ್ ಗೋಯಿಂಗ್ ಮತ್ತು 42 ಇನ್ ಕಮಿಂಗ್ ಕಾಲ್ ಗಳು ಬಂದಿದ್ದು, ಒಟ್ಟು 104 ಬಾರಿ ಸಂಪರ್ಕಿಸಲಾಗಿದೆ. ಈ ಪ್ರಕಾರ ಸಂತ್ರಸ್ತೆಯು ಮತ್ತು ಮುಖ್ಯ ಆರೋಪಿಗಳು ನಿರಂತರ ಸಂಪರ್ಕದಲ್ಲಿರುವುದು ಸ್ಪಷ್ಟ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ 14 ರಂದು ಸಂತ್ರಸ್ತೆ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಎಳೆದೊಯ್ದು ಹಲ್ಲೆ ನಡೆಸಿ ಅತ್ಯಾಚಾರ ಎಸಗಲಾಗಿತ್ತು. ಗಂಭೀರ ಗಾಯಗೊಂಡಿದ್ದ ಯುವತಿ ಸೆಪ್ಟೆಂಬರ್ 29 ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು.
ಇದನ್ನೂ ಓದಿ: ಟ್ರಂಪ್ ಡಿಸ್ಚಾರ್ಜ್; ಶ್ವೇತ ಭವನದಲ್ಲಿ ಮಾಸ್ಕ್ ತೆಗೆದು ಹಾಕಿ need not fear ಎಂದರು