ಮಹಾರಾಷ್ಟ್ರದ 19 ಶಾಸಕರ ಅಮಾನತು
Team Udayavani, Mar 23, 2017, 3:45 AM IST
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎನ್ಸಿಪಿಯ 19 ಶಾಸಕರನ್ನು ಮುಂದಿನ 9 ತಿಂಗಳ ಕಾಲ ಅಮಾನತು ಮಾಡಲಾಗಿದೆ.
“”ಬಜೆಟ್ ಮಂಡನೆ ವೇಳೆ ದಾಂಧಲೆ ನಡೆಸುವ ಜತೆಗೆ ಅಸಾಂವಿಧಾನಿಕ ವರ್ತನೆ ತೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ 9 ಹಾಗೂ ಎನ್ಸಿಪಿಯ 10 ಶಾಸಕರನ್ನು ಡಿಸೆಂಬರ್ 31ರವರೆಗೆ ಅಮಾನತು ಮಾಡಲಾಗಿದ್ದು, ಅಮಾನತು ಅವಧಿ ಮುಗಿಯುವವರೆಗೆ ಶಾಸನಸಭೆಯ ಯಾವುದೇ ಕಲಾಪಗಳಲ್ಲಿ ಪಾಲ್ಗೊಳ್ಳುವಂತಿಲ್ಲ,” ಎಂದು ಅಲ್ಲಿನ ಸಂಸದೀಯ ವ್ಯವಹಾರಗಳ ಸಚಿವ ಗಿರೀಶ್ ಬಾಪಟ್ ತಿಳಿಸಿದ್ದಾರೆ.
ಮಾ.18ರಂದು ಹಣಕಾಸು ಸಚಿವ ಸುಧೀರ್ ಮುನಗಂಟಿವಾರ್ ಅವರು ಬಜೆಟ್ ಮಂಡಿಸುವಾಗ, ಬಿಜೆಪಿ ನೇತೃತ್ವದ ಸರ್ಕಾರ ಕೃಷಿ ಸಾಲ ಮನ್ನಾ ಮಾಡುವ ಭರವಸೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳ ಶಾಸಕರು ದಾಂಧಲೆ ನಡೆಸಿದ್ದರು. ಶಾಸಕರ ಅಮಾನತು ಕ್ರಮವನ್ನು “ಪ್ರಜಾಪ್ರಭುತ್ವದ ಕೊಲೆ’ ಎಂದು ವ್ಯಾಖ್ಯಾನಿಸಿರುವ ಪ್ರತಿಪಕ್ಷಗಳ ಮುಖಂಡರು, ಅಮಾನತು ಆದೇಶ ಹಿಂಪಡೆಯುವವರೆಗೂ ವಿಧಾನಸಭೆಯ ಯಾವುದೇ ಕಲಾಪಗಳಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ತಿಳಿಸಿದ್ದಾರೆ.
ಹದಿನೈದು ದಿನಗಳ ಹಿಂದೆಯೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗುತ್ತಿತ್ತು.