ವಿಶ್ವಾಸಮತ; ಅರ್ಜಿ ವಾಪಸ್ ಪಡೆಯುತ್ತೇವೆ, ಪಕ್ಷೇತರ ಶಾಸಕರ ಮನವಿಗೆ ಸುಪ್ರೀಂ ಹೇಳಿದ್ದೇನು?
Team Udayavani, Jul 24, 2019, 11:54 AM IST
ನವದೆಹಲಿ:ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ವಿಶ್ವಾಸಮತ ನಡೆಸಲು ಸೂಚನೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವುದಾಗಿ ಬುಧವಾರ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಮಂಗಳವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ಆಡಳಿತ ಪಕ್ಷದ ಪರ 99 ಮತ ಶಾಸಕರಿದ್ದರೆ, ಬಿಜೆಪಿ ಪರ 105 ಶಾಸಕರಿದ್ದರು. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 103 ಬಿಜೆಪಿಯ ಕೈಯಲ್ಲಿದ್ದು, ಸರ್ಕಾರ ರಚಿಸಲು ಮುಂದಾಗಿದೆ.
ಬೆಳಗ್ಗೆ ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೊಗೋಯ್ ನೇತೃತ್ವದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ, ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಪರ ವಕೀಲರು ನಿನ್ನೆ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಎಲ್ಲಿ ಮುಕುಲ್ ರೋಹ್ಟಗಿ(ಬಂಡಾಯ ಶಾಸಕರ ಪರ ಹಿರಿಯ ವಕೀಲ), ಎಲ್ಲಿ ಎಎಂ ಸಿಂಘ್ವಿ(ಸ್ಪೀಕರ್ ಪರ ವಕೀಲರು) ಎಂದು ಸುಪ್ರೀಂ ಪೀಠ ಪ್ರಶ್ನಿಸಿತ್ತು. ನಾವು ಹಿರಿಯ ವಕೀಲರ ಸಮ್ಮುಖದಲ್ಲಿ ನಮ್ಮ ತೀರ್ಪನ್ನು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿ ವಿಚಾರಣೆ ಮುಂದೂಡಿದೆ.