ಕಾಜಿರಂಗಾದ ಶೇ.70 ಭಾಗ ಜಲಾವೃತ
Team Udayavani, Jul 15, 2019, 5:47 AM IST
ಬಕ್ಸಾ/ಹೊಸದಿಲ್ಲಿ: ಅಸ್ಸಾಂ ಅನ್ನು ನಡುಗಿಸಿರುವ ವರುಣ, ಪ್ರವಾಹದ ಅಬ್ಬರವು 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ನಿರ್ವಸಿತರನ್ನಾಗಿಸಿದೆ. ದಿಢೀರ್ ಪ್ರವಾಹದಿಂದಾಗಿ 72 ಗಂಟೆಗಳ ಅವಧಿಯಲ್ಲಿ 10 ಮಂದಿ ಮೃತಪಟ್ಟಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ದುಸ್ತರವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದ ಶೇ.70ರಷ್ಟು ಭಾಗ ಜಲಾವೃತವಾಗಿದೆ. ಇಲ್ಲಿರುವ ಪ್ರಾಣಿ ಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಸರಕಾರವು ಅರಣ್ಯಾಧಿಕಾರಿಗಳ ರಜೆಗಳನ್ನು ರದ್ದು ಮಾಡಿ, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. ರಾತ್ರಿ ವೇಳೆಯಲ್ಲೂ ಅರಣ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಾಣಿ ಗಳು ಬೇಟೆಗಾರರಿಗೆ ಬಲಿಯಾಗದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಬಕ್ಸಾ ಜಿಲ್ಲೆಯ ಬಲಿಪುರ್ ಚಾರ್ನಲ್ಲಿ ಸಿಲುಕಿ ಕೊಂಡಿದ್ದ 150 ಮಂದಿ ಗ್ರಾಮಸ್ಥರನ್ನು ಸೇನೆ ರಕ್ಷಿಸಿದೆ.
ನೇಪಾಲದಲ್ಲಿ ಮೃತರ ಸಂಖ್ಯೆ 60ಕ್ಕೇರಿಕೆ: ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ನೇಪಾಲದಲ್ಲಿ ಮೃತಪಟ್ಟವರ ಸಂಖ್ಯೆ ರವಿವಾರ 50ಕ್ಕೇರಿಕೆಯಾಗಿದೆ. ಮಳೆ ಹಾಗೂ ನೆರೆ ಸಂಬಂಧಿ ಘಟನೆಗಳಿಂದ 35 ಮಂದಿ ಗಾಯಗೊಂಡಿದ್ದರೆ, 35 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರದಿಂದೀಚೆಗೆ ನಿರಂತರ ಮಳೆ ಸುರಿಯುತ್ತಿದ್ದು, ಪರಿಣಾಮ 25 ಜಿಲ್ಲೆಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕಠ್ಮಂಡುವಿನಲ್ಲಿ 185 ಸಹಿತ ಒಟ್ಟು 1,104 ಮಂದಿಯನ್ನು ನೇಪಾಲ ಸೇನಾ ಪಡೆ ರಕ್ಷಿಸಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾ ಚರಣೆಗೆಂದು ದೇಶಾದ್ಯಂತ ಒಟ್ಟು 27,380 ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ.
ಕಟ್ಟಡ ಕುಸಿತ: ಯೋಧ ಸೇರಿ ಇಬ್ಬರ ಸಾವು
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡವೊಂದು ರವಿವಾರ ಕುಸಿದುಬಿದ್ದಿದೆ. ಒಬ್ಬ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 23 ಮಂದಿಯನ್ನು ರಕ್ಷಿಸಲಾಗಿದೆ. ಕನಿಷ್ಠ 12 ಯೋಧರು ಅವಶೇಷಗಳಡಿ ಸಿಲುಕಿದ್ದಾರೆ. ಉತ್ತರಾಖಂಡಕ್ಕೆ ತೆರಳುತ್ತಿದ್ದ ಯೋಧರ ಕುಟುಂಬಗಳು ಮಾರ್ಗಮಧ್ಯೆ ಊಟಕ್ಕೆಂದು ಈ ಕಟ್ಟಡದಲ್ಲಿದ್ದ ಹೋಟೆಲ್ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಕಟ್ಟಡ ಕುಸಿದುಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.