ಗಾಳಿಯಲ್ಲಿ ಗುಂಡು ಸಿಡಿಸಿ ಓಡಿದ ಅಭಿನಂದನ್ ದಾಖಲೆ ನುಂಗಿದರು
Team Udayavani, Mar 1, 2019, 12:30 AM IST
ಪಾಕಿಸ್ಥಾನದ ಯುದ್ಧ ವಿಮಾನಗಳು ಭಾರತದ ವಾಯುಗಡಿಯನ್ನು ಅತಿಕ್ರಮಿಸಿ ಸೇನಾ ನೆಲೆಯ ಮೇಲೆ ದಾಳಿಯಿಡುವುದಕ್ಕೆ ಆಸ್ಪದ ನೀಡದೇ ವಿಮಾನಗಳನ್ನು ಹಿಮ್ಮೆಟ್ಟಿಸಿದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ಥಾನದ ನೆಲದಲ್ಲಿ ಸಿಕ್ಕಿಬಿದ್ದಿದ್ದು ಇಡೀ ದೇಶಕ್ಕೆ ಆತಂಕ ಸೃಷ್ಟಿಸಿತ್ತು. ಆದರೆ ಅವರು ಪಾಕ್ ಗಡಿಯೊಳಕ್ಕೆ ಹೇಗೆ ಹೋದರು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.
– ಬುಧವಾರ ಬೆಳಗ್ಗೆ ಪಾಕಿಸ್ಥಾನ ವಾಯುಪಡೆಯ ಹತ್ತು ವಿಮಾನಗಳು ಗಡಿ ಭಾಗದಲ್ಲಿರುವ ಭಾರತದ ಸೇನಾ ನೆಲೆ ಮೇಲೆ ದಾಳಿ ಮಾಡಲು ಆಗಮಿಸಿದ್ದವು. ಈ ಬಗ್ಗೆ ಮೊದಲೇ ಸೂಚನೆಯಿದ್ದ ವಾಯುಸೇನೆ ಗಡಿ ಭಾಗದಲ್ಲಿ ಪಹರೆ ಯುದ್ಧ ವಿಮಾನಗಳನ್ನು ನಿಯೋಜಿಸಿತ್ತು. ಈ ಪಡೆಯಲ್ಲಿ ಎರಡು ಮಿಗ್ 21 ಹಾಗೂ ಎರಡು ಸುಖೋಯ್ ವಿಮಾನಗಳಿದ್ದವು.
– ಪಾಕ್ ವಿಮಾನಗಳು ಗಡಿ ಸಮೀಪಿಸುತ್ತಿದ್ದಂತೆ ಇವುಗಳನ್ನು ಭಾರತೀಯ ಯುದ್ಧ ವಿಮಾನಗಳು ಎದುರಾದವು. ಈ ವೇಳೆ ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಅಭಿನಂದನ್ ನಡೆಸುತ್ತಿದ್ದ ಮಿಗ್ 21 ವಿಮಾನ ಎದುರುಗೊಂಡು ಬೆನ್ನಟ್ಟಿತು.
– ಈ ಹೋರಾಟದಲ್ಲಿ ಅಭಿನಂದನ್ರ ಮಿಗ್ 21 ವಿಮಾನ ಗಡಿಯಾಚೆಗೆ ತೆರಳಿತ್ತು. ಅಷ್ಟೇ ಅಲ್ಲ, ಅಭಿನಂದನ್ ನಡೆಸುತ್ತಿದ್ದ ಮಿಗ್ 21 ಯುದ್ಧ ವಿಮಾನವನ್ನು ಶತ್ರು ಪಡೆ ಹೊಡೆದುರುಳಿಸುವುದಕ್ಕೂ ಮುನ್ನವೇ ಕ್ಷಿಪಣಿಯನ್ನು ಉಡಾಯಿಸಿ ಎಫ್16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು.
– ತನ್ನ ವಿಮಾನ ಕ್ಷಿಪಣಿ ದಾಳಿಗೆ ತುತ್ತಾಗುತ್ತಿದ್ದಂತೆಯೇ ಪ್ಯಾರಾಚೂಟ್ ಮೂಲಕ ಅಭಿನಂದನ್ ಕೆಳಕ್ಕೆ ಜಿಗಿದರು. ಇವರು ಪ್ಯಾರಾಚೂಟ್ನಿಂದ ಕೆಳಗೆ ಜಿಗಿದಿದ್ದನ್ನು ಗಡಿ ಭಾಗದ ಭಿಂಬರ್ ಹಾಗೂ ಇತರ ಗ್ರಾಮಗಳು ಜನರು ನೋಡಿದ್ದಾರೆ. ಅಲ್ಲದೆ, ಬೀಳುತ್ತಿದ್ದಂತೆಯೇ ಬೆನ್ನು ನೋವು ಎಂದು ಹೇಳುತ್ತಿದ್ದರು ಮತ್ತು ನನಗೆ ಕುಡಿಯಲು ನೀರು ಬೇಕು ಎಂದು ಕೇಳಿದರು
– ಗ್ರಾಮದ ಜನರು ಅಲ್ಲಿ ಸೇರಿದರು. ಅಲ್ಲಿದ್ದ ಕೆಲವು ಯುವಕರು ಅಭಿನಂದನ್ ಅವರನ್ನು ಬೆನ್ನಟ್ಟಲು ಶುರು ಮಾಡುತ್ತಿದ್ದಂತೆ, ಅಭಿನಂದನ್ ತಮ್ಮ ಕೈಯ್ಯಲ್ಲಿದ್ದ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸುಮಾರು ಅರ್ಧ ಕಿಲೋಮೀಟರುಗಳ ವರೆಗೆ ಓಡಿದರು. ಈ ವೇಳೆ ಒಬ್ಟಾತ ಅವರ ಕಾಲಿಗೆ ಗುಂಡು ಹಾರಿಸಿದ ಎಂದು ಸ್ಥಳೀಯರು ತಿಳಿಸಿದ್ದಾರೆ.
– ಒಂದು ಕೆರೆಯ ಬಳಿ ತಲುಪುತ್ತಿದ್ದಂತೆ ಅಭಿನಂದನ್ ತಮ್ಮ ಜೇಬಿನಿಂದ ಯಾವುದೋ ದಾಖಲೆ ಹೊರ ತೆಗೆದು, ಅದನ್ನು ನಾಶ ಮಾಡಲು ಯತ್ನಿಸಿದರು. ಒಂದು ಹಂತದಲ್ಲಿ ಆ ದಾಖಲೆಗಳನ್ನು ನುಂಗಲೂ ಯತ್ನಿಸಿದರು. ಅಷ್ಟರಲ್ಲಿ, ಪಾಕ್ ಸೇನೆ ಬಂದು, ಅವರನ್ನು ವಶಕ್ಕೆ ಪಡೆಯಿತು.