ಎಐಎಡಿಎಂಕೆಯಲ್ಲಿ ವಜಾ ಸರಣಿ ಮುಂದುವರಿಕೆ
Team Udayavani, Aug 29, 2017, 7:00 AM IST
ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಪರಸ್ಪರ ವಜಾ ಕ್ರಮಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ಸೆಲ್ವಂ ನೇತೃತ್ವದಲ್ಲಿ ಸೋಮವಾರ ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಶಶಿಕಲಾ ಮತ್ತು ದಿನಕರನ್ ಅವರನ್ನು ಪಕ್ಷದ ಪರಮೋಚ್ಚ ಸ್ಥಾನಗಳಿಂದ ತೆಗೆದು ಹಾಕಲಾಗಿದೆ. ಆ.10 ರಂದೇ ಇವರಿಬ್ಬರನ್ನು ಪಕ್ಷದಿಂದ ಹೊರಗೆ ಹಾಕಲಾಗಿದೆ ಎಂದು ಈ ನಾಯಕರು ಹೇಳಿಕೊಂಡಿದ್ದಾರೆ.
ಈ ಮಧ್ಯೆ, ದಿನಕರನ್ ಅವರು ಪಳನಿಸ್ವಾಮಿ ಬಣದಲ್ಲಿರುವ ಸಚಿವರು ಮತ್ತು ಶಾಸಕರನ್ನು ಪಕ್ಷದ ಹುದ್ದೆಗಳಿಂದ ತೆರವು ಮಾಡುವ ಕೆಲಸ ಮುಂದುವರಿಸಿದ್ದಾರೆ. ಸೋಮವಾರ ಪಿ.ತಂಗಮಣಿ ಮತ್ತು ಎಸ್.ಪಿ.ವೇಲುಮಣಿ ಅವರನ್ನು ಪಕ್ಷದ ಹುದ್ದೆಗಳಿಂದ ವಜಾ ಮಾಡಿದ್ದಾರೆ. ಅಲ್ಲದೆ ಎಂ.ನಟರಾಜನ್, ಟಿ. ರತ್ನವೇಲು ಎಂಬುವರನ್ನೂ ತೆಗೆದುಹಾಕಲಾಗಿದೆ. ಶಶಿಕಲಾ ಅವರ ಒಪ್ಪಿಗೆ ಮೇರೆಗೆ ಈ ಎಲ್ಲರನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಸೆ.12 ರಂದು ಇದೇ ಬಣ ಸಾಮಾನ್ಯ ಸಭೆ ಕರೆದಿದೆ.