ತುರ್ತು ಸಾಲಕ್ಕಾಗಿ ಕೇಂದ್ರಕ್ಕೆ ವಿಮಾನ ಸಂಸ್ಥೆಗಳ ಮೊರೆ
Team Udayavani, Nov 22, 2018, 6:00 AM IST
ನವದೆಹಲಿ: ಜಾಗತಿಕ ಮಟ್ಟದಲ್ಲಿ ಏರುತ್ತಿರುವ ತೈಲ ಬೆಲೆ ಹಾಗೂ ದೇಶೀಯ ಮಾರುಕಟ್ಟೆಯಲ್ಲಿನ ದರ ಸಮರದಿಂದಾಗಿ ನಷ್ಟದತ್ತ ಮುಖ ಮಾಡಿರುವ ಭಾರತೀಯ ವೈಮಾನಿಕ ಸೇವೆಗಳ ಉದ್ಯಮ, ಈಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ವಿಮಾನ ಸೇವಾ ಸಂಸ್ಥೆಗಳ ಒಕ್ಕೂಟ ನಾಗರಿಕ ವಿಮಾನ ಸಚಿವಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು, ನಷ್ಟಕ್ಕೊಳಗಾಗಿರುವ ಸಂಸ್ಥೆಗಳಿಗೆ ಸಾಲ ಸೌಲಭ್ಯ ನೀಡಿ, ವಿದೇಶಿ ತೈಲ ಸಂಸ್ಥೆಗಳಿಂದ ತೈಲ ಖರೀದಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿವೆ.
ಒಕ್ಕೂಟದಿಂದ ಪತ್ರ ಬಂದಿರುವುದನ್ನು ಸಚಿವಾಲಯದ ಕಾರ್ಯದರ್ಶಿ ರಾಜೀವ್ ನಯನ್ ಚೌಬೆ ಅವರು ಖಾತ್ರಿ ಪಡಿಸಿದ್ದಾರೆ. ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಟಿಕೆಟ್ ಬೆಲೆ ಏರಿಸಲು ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ದೇಶೀಯ ಮಟ್ಟ ದಲ್ಲಿರುವ ದೊಡ್ಡ ಸ್ಪರ್ಧೆಯೇ ಇದಕ್ಕೆ ಕಾರಣ. ಜತೆಗೆ, ರೂಪಾಯಿ ಮೌಲ್ಯ ಕುಸಿತ ಕೂಡ ಸಂಸ್ಥೆಗಳನ್ನು ಸಂಕಷ್ಟಕ್ಕೀಡು ಮಾಡಿದೆ. ನಷ್ಟ ಹೀಗೇ ಮುಂದುವರಿದರೆ 2019ರ ಮಾರ್ಚ್ ವೇಳೆಗೆ ಭಾರತೀಯ ಸಂಸ್ಥೆಗಳು ಅಂದಾಜು 13,000 ಕೋಟಿ ರೂ. ಕಳೆದುಕೊಳ್ಳಲಿವೆ. ಅದಕ್ಕಾಗಿ 21,000 ಕೋಟಿ ರೂ. ತುರ್ತು ಸಾಲದ ಅಗತ್ಯವಿದೆ ಎಂದು ಹೇಳಲಾಗಿದೆ.