ಉತ್ತರಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಅಖೀಲೇಶ್ ಘೋಷಣೆ
ಅಚ್ಚರಿ ನಿರ್ಧಾರ ಪ್ರಕಟಿಸಿದ ಎಸ್ಪಿ ನಾಯಕ
Team Udayavani, Nov 1, 2021, 10:45 PM IST
ಲಕ್ನೋ: ಅಚ್ಚರಿಯ ಬೆಳವಣಿಗೆಯೆಂಬಂತೆ, ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಾವು ಕಣಕ್ಕಿಳಿಯುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಘೋಷಿಸಿದ್ದಾರೆ.
ಸೋಮವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಅಜಂಗಡದ ಸಂಸದರೂ ಆಗಿರುವ ಅಖೀಲೇಶ್, ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದಾರೆ. ಆದರೆ, ಅವರು ಚುನಾವಣೆಗೇ ಸ್ಪರ್ಧಿಸಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನೂ ಅವರು ತಿಳಿಸಿಲ್ಲ.
ಇದನ್ನೂ ಓದಿ:2 ತೈಲ ಕ್ಷೇತ್ರಗಳ ಶೇ.60 ಷೇರು ವಿದೇಶಿ ಕಂಪನಿಗಳಿಗೆ ಮಾರಾಟ?
ಇದೇ ವೇಳೆ, ಎಸ್ಪಿ ಹಾಗೂ ಆರ್ಎಲ್ಡಿ ನಡುವಿನ ಮೈತ್ರಿ ಮಾತುಕತೆ ಅಂತಿಮಗೊಂಡಿದೆ. ಸದ್ಯದಲ್ಲೇ ಟಿಕೆಟ್ ಹಂಚಿಕೆ ಕುರಿತು ನಿರ್ಧರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಜತೆಗೆ, ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ ಲೋಹಿಯಾ(ಪಿಎಸ್ಪಿಎಲ್)ಗೂ ಗೌರವಯುತ ಸ್ಥಾನ ನೀಡಲಾಗುವುದು ಎಂದೂ ಅಖೀಲೇಶ್ ಹೇಳಿದ್ದಾರೆ.