ಉದ್ಧಟತನ ತೋರುವ ಪಾಕ್ ಜತೆ ಸಂಬಂಧ ಬೇಕಿಲ್ಲ
Team Udayavani, Apr 22, 2018, 6:00 AM IST
ನವದೆಹಲಿ/ಬೀಜಿಂಗ್: ಉದ್ಧಟತನ ತೋರುವ ಒಂದು ದೇಶವನ್ನು ಹೊರತುಪಡಿಸಿ ಉಳಿದ ಎಲ್ಲ ನೆರೆರಾಷ್ಟ್ರಗಳ ಜತೆಗೂ ಭಾರತ ಉತ್ತಮ ಬಾಂಧವ್ಯ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಯಾರ ಮಾತಿಗೂ ಕಿವಿಗೊಡದ ಪಾಕಿಸ್ತಾನವನ್ನು ಉಲ್ಲೇಖೀಸಿ ಅವರು ಈ ಹೇಳಿಕೆ ನೀಡಿದ್ದಾರೆ.
ನಾವು ಯಾವತ್ತೂ ನೆರೆಯವರ ಜತೆ ಉತ್ತಮ ಸಂಬಂಧ ಬಯಸುತ್ತೇವೆ. ಆದರೆ, ನೆರೆಯವರಲ್ಲಿ ಒಂದು ರಾಷ್ಟ್ರ ಏನು ಹೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದು, ಒಂದಲ್ಲ ಒಂದು ದಿನ ಆ ರಾಷ್ಟ್ರ ಮಣಿಯಲೇಬೇಕು ಎಂದಿದ್ದಾರೆ ಸಿಂಗ್. ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರವನ್ನು ನಮ್ಮ ಭದ್ರತಾ ಪಡೆಗಳು ನೀಡುತ್ತಿವೆ. ಭಯೋತ್ಪಾದನೆಯ ಮೂಲಕ ನಮ್ಮ ದೇಶ ವನ್ನು ಒಡೆಯಲು ಪಾಕ್ ಯತ್ನಿಸುತ್ತಿದೆ. ಆದರೆ, ಅವರ ಪ್ರಯತ್ನವನ್ನು ನಮ್ಮ ಭದ್ರತಾ ಪಡೆಗಳು ತಡೆಯುತ್ತಿದ್ದು, ಈ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಇಲ್ಲ: ಇದೇ ವೇಳೆ, ಬೀಜಿಂಗ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗದ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಪಾಲ್ಗೊಳ್ಳಲಿ ದ್ದಾರೆ. ಆದರೆ, ಅಲ್ಲಿ ಇವರು ಪಾಕಿಸ್ತಾನದ ಸಚಿವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.