ಅಮರನಾಥ ಪ್ರವಾಹದಲ್ಲಿ 15 ಮಂದಿ ಮಾತ್ರ ಸಾವು: ಮನೋಜ್ ಸಿನ್ಹಾ
Team Udayavani, Jul 15, 2022, 7:50 AM IST
ಶ್ರೀನಗರ: ಅಮರನಾಥ ದೇಗುಲಕ್ಕೆ ತೆರಳುವ ಬೇಸ್ ಕ್ಯಾಂಪ್ ಸಮೀಪ ಜು. 8ರಂದು ಉಂಟಾಗಿದ್ದ ಹಠಾತ್ ಪ್ರವಾಹಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಒಟ್ಟು 15 ಮಂದಿ ಅಸುನೀಗಿದ್ದಾರೆ ಮತ್ತು ಯಾರೂ ನಾಪತ್ತೆಯಾಗಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶ ನೀಡಿದ್ದ ಸಹಾಯವಾಣಿಗಳಿಗೆ 200ಕ್ಕೂ ಅಧಿಕ ಕರೆಗಳು ಬಂದಿವೆ. ಕೆಲವು ಯಾತ್ರಿಕರ ವಿವರ ಪರಿಶೀಲಿಸಲಾಗಿದೆ ಮತ್ತು ಕೆಲವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದುದರಿಂದ ಅವರ ಇರವು ಪತ್ತೆ ಹಚ್ಚಲು ಕಷ್ಟವಾಗಿತ್ತು ಎಂದಿದ್ದಾರೆ.
ಘಟನೆಯಲ್ಲಿ ಒಟ್ಟು 55 ಮಂದಿ ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಇಬ್ಬರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಉಳಿದವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅಸುನೀಗಿದ 14 ಮಂದಿಯ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.
ಯಾತ್ರೆ ರದ್ದು: ಈ ನಡುವೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಗುರುವಾರ ಪಹಲ್ಗಾಂವ್ ಮತ್ತು ಬಲ್ತಾಲ್ ಮೂಲಕ ತೆರಳುವ ಯಾತ್ರೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇನ್ನೊಂದೆಡೆ 2 ಪ್ರತ್ಯೇಕ ಘಟನೆಗಳಲ್ಲಿ ಯಾತ್ರೆಗೆ ತೆರಳಿದ್ದ ವಾಹನಗಳು ಅಪಘಾತಕ್ಕೀಡಾಗಿ 13 ಮಂದಿ ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.