ದೇಶ ರಾಜಕಾರಣಕ್ಕೆ ಆನುವಂಶಿಕತೆ ಕಾಂಗ್ರೆಸ್ ಕೊಡುಗೆ: ಶಾ
Team Udayavani, Sep 25, 2017, 4:02 PM IST
ಹೊಸದಿಲ್ಲಿ : ”ದೇಶ ರಾಜಕಾರಣಕ್ಕೆ ಆನುವಂಶಿಕತೆಯ ಕೊಡುಗೆಯನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಹೊರತು ಬೇರೆ ಯಾರೂ ಅಲ್ಲ” ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ “ವಂಶಾಡಳಿತೆಯ ತಿರುಗೇಟು’ ನೀಡಿದ್ದಾರೆ.
“ಭಾರತೀಯ ಜನತಾ ಪಕ್ಷ ಉತ್ತಮ ಕಾರ್ಯ ನಿರ್ವಹಣೆಯನ್ನು ಸಾಧಿಸಿ ತೋರಿಸುವ ರಾಜಕಾರಣದಲ್ಲಿ ನಂಬಿಕೆ ಇರಿಸಿದೆ. ಸ್ವಚ್ಚತೆ, ಬಡತನ ನಿರ್ಮೂಲನೆ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ, ಜಾತಿ ಮತ್ತು ಕೋಮು ರಾಜಕಾರಣದ ಅಂತ್ಯಕ್ಕೆ ಹೋರಾಟದೊಂದಿಗೆ ಸಮಗ್ರ ಜನಕಲ್ಯಾಣಕ್ಕೆ ಬದ್ಧತೆ ತೋರುವ ಅದಮ್ಯ ವಿಶ್ವಾಸವನ್ನು ಹೊಂದಿದೆ” ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ನವಭಾರತದ ದೃಷ್ಟಾರತೆಯ ವಿವರ ನೀಡಿ, ಪಕ್ಷದ ನಾಯಕರು ಮುಂದಿನ ಐದು ವರ್ಷಗಳಲ್ಲಿ “ನವಭಾರತ’ವನ್ನು ಸಾಕ್ಷಾತ್ಕರಿಸುವ ಸಕಲ ಪ್ರಯತ್ನಗಳನ್ನು ನಡೆಸಬೇಕು ಎಂದು ಕರೆ ನೀಡಿದರು.