ಗುಂಡೇಟಿನಿಂದಲೇ ಆ್ಯಪಲ್ ಮ್ಯಾನೇಜರ್ ಸಾವು: ಅಟಾಪ್ಸಿ ವರದಿ
Team Udayavani, Oct 2, 2018, 12:15 PM IST
ಲಕ್ನೋ: ಆ್ಯಪಲ್ ಕಂಪೆನಿಯ ಎಕ್ಸಿಕ್ಯುಟಿವ್ ವಿವೇಕ್ ತಿವಾರಿ ಅವರ ದಾರುಣ ಮತ್ತು ದುರದೃಷ್ಟಕರ ಸಾವಿನ ಬಗ್ಗೆ ತೀವ್ರ ರಾಜಕೀಯ ನಡೆಯುತ್ತಿರುವ ನಡುವೆಯೇ ಇದೀಗ ಅವರ ಮರಣೋತ್ತರ ವರದಿ ಬಂದಿದ್ದು ಆ ಪ್ರಕಾರ ತಿವಾರಿ ಅವರ ಎಡ ಗದ್ದಕ್ಕೆ ತಗುಲಿರುವ ಗುಂಡೇಟಿನಿಂದಲೇ ಅವರ ಸಾವು ಸಂಭವಿಸಿರುವುದು ದೃಢಪಟ್ಟಿದೆ.
ವಿವೇಕ್ ತಿವಾರಿ ಅವರ ಮರಣೋತ್ತರ ವರದಿಯಿಂದ ಇನ್ನೊಂದು ಸಂಗತಿಯೂ ಸಾಬೀತಾಗಿದೆ. ಅದೆಂದರೆ ಆತ್ಮರಕ್ಷಣೆಗಾಗಿ ಪೊಲೀಸರು ಆತನಿಗೆ ಗುಂಡು ಹೊಡೆದರೆಂಬ ವಾದವು ಸುಳ್ಳೆಂದು ಗೊತ್ತಾಗಿದೆ.
ತಿವಾರಿ ಸಾವು ಆಕಸ್ಮಿಕ ಅವಘಡದಿಂದ ಆದುದಲ್ಲ, ಬದಲು ಗುಂಡೇಟಿನಿಂದ ಆಗಿರುವ ಮಾರಣಾಂತಿಕ ಗಾಯದಿಂದಲೇ ಸಂಭವಿಸಿದೆ ಎಂಬುದು ಅಟಾಪ್ಸಿ ವರದಿಯಿಂದ ದೃಢ ಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಘಟನೆಯ ಹಿನ್ನೆಲೆ :
ಉತ್ತರ ಪ್ರದೇಶ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಅವರ ಆದೇಶಕ್ಕೆ ಅನುಗುಣವಾಗಿ ಕಾರು ನಿಲ್ಲಸದೆ ಪೊಲೀಸರು ಮೋಟಾರು ಸೈಕಲ್ ಮೇಲೆ ಮೂರು ಬಾರಿ ಕಾರು ಹರಿಸಲು ಯತ್ನಿಸಿ ಅಂತಿಮವಾಗಿ ಪೊಲೀಸರಿಗೆ ಗುಂಡಿಗೆ ಬಲಿಯಾದ ಆ್ಯಪಲ್ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಪ್ರಕರಣದಲ್ಲಿ ಪೊಲೀಸರಿಗೆ ಯಾವುದೇ ತಪ್ಪಾಗಿಲ್ಲ; ಪೊಲೀಸರು ಕೇವಲ ಕ್ರಿಮಿನಲ್ಗಳ ಮೇಲೆ ಮಾತ್ರವೇ ಗುಂಡೆಸೆಯುತ್ತಾರೆ ಎಂದು ಉತ್ತರ ಪ್ರದೇಶದ ನೀರಾವರಿ ಸಚಿವ ಧರ್ಮಪಾಲ್ ಸಿಂಗ್ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಪೊಲೀಸ್ ಎನ್ಕೌಂಟರ್ನಲ್ಲಿ ಯಾವುದೇ ತಪ್ಪಿಲ್ಲ; ಪೊಲೀಸರು ಕೇವಲ ಕ್ರಿಮಿನಲ್ಗಳ ಮೇಲೆ ಮಾತ್ರವೇ ಗುಂಡೆಸೆಯುತ್ತಾರೆ. ತಪ್ಪು ಯಾರೇ ಎಸಗಿದರೂ ಅವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಸಚಿವ ಧರ್ಮಪಾಲ್ ಸಿಂಗ್ ಹೇಳಿರುವುದನ್ನು ಎಎನ್ಐ ವರದಿ ಮಾಡಿತ್ತು.
ಶುಕ್ರವಾರ ಆ್ಯಪಲ್ ಸೇಲ್ಸ್ ಮ್ಯಾನೇಜರ್ ತಿವಾರಿ ಅವರು ಮಹಿಳೆಯೊಂದಿಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಆ ಮಹಿಳೆಯು “ಸತ್ಯ ಹೇಳುವಲ್ಲಿ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ; ತಪ್ಪೆಸಗಿದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು’ ಎಂದು ಹೇಳಿರುವುದನ್ನು ಎಎನ್ಐ ವರದಿ ಮಾಡಿತ್ತು.
ಉತ್ತರ ಪ್ರದೇಶ ಪೊಲೀಸರು ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರೂಪಿಸಿದ್ದಾರೆ. ಪೊಲೀಸ್ ಸುಪರಿಂಟೆಂಡೆಂಟ್ ಓರ್ವರು ಈ ತಂಡದ ನೇತೃತ್ವ ವಹಿಸಿದ್ದರು.
ತಿವಾರಿಗೆ ಗುಂಡೆಸೆದ ಪೊಲೀಸ್ ಸಿಬಂದಿ, “ನನ್ನದೇನೂ ತಪ್ಪಿಲ್ಲ, ನಾನು ಆತ್ಮ ರಕ್ಷಣೆಗಾಗಿ ಗುಂಡೆಸೆದೆ, ಏಕೆಂದರೆ ಆತ ಮೂರು ತನ್ನ ಕಾರನ್ನು ನಮ್ಮ ಮೋಟಾರು ಸೈಕಲ್ ಮೇಲೆ ಹರಿಸಿ ನಮ್ಮನ್ನು ಸಾಯಿಸಲು ಯತ್ನಿಸಿದ’ ಎಂದು ಹೇಳಿದ್ದರು.