ಈ ಕೂಡಲೇ ವಿಶ್ವಾತಮತಕ್ಕೆ ನಿಗದಿಪಡಿಸಿ
Team Udayavani, Jul 22, 2019, 3:00 AM IST
ನವದೆಹಲಿ: ವಿಶ್ವಾಸಮತ ಯಾಚನೆಯಲ್ಲಿ ಮಂದಗತಿ ಅನುಸರಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಈ ಕೂಡಲೇ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಬೇಕೆಂದು ಪ್ರಾರ್ಥಿಸಿ, ಕರ್ನಾಟಕದ ಇಬ್ಬರು ಪಕ್ಷೇತರ ಶಾಸಕರಾದ ಆರ್. ಶಂಕರ್, ಎಚ್. ನಾಗೇಶ್ ಅವರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಶಾಸಕರ ಅರ್ಜಿಯು, ಜು. 22ರಂದು ತ್ವರಿತ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.
ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ನ ಒಟ್ಟು 14 ಶಾಸಕರು ರಾಜಿನಾಮೆ ಸಲ್ಲಿಸಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರ ಅಸ್ಥಿರಗೊಂಡಿದೆ. ಇದೇ ವೇಳೆ, ಶಾಸಕರಾದ ಆರ್. ಶಂಕರ್, ಎಚ್. ನಾಗೇಶ್ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸೂಚಿಸಿದ್ದಾರೆ.
ಸದನದಲ್ಲಿ ಬಹುಮತ ಸಾಬೀತಿಗೆ ಈಗಾಗಲೇ ರಾಜ್ಯಪಾಲರು ಎರಡು ಬಾರಿ ಗಡುವು ಕೊಟ್ಟಿದ್ದರೂ ಸರ್ಕಾರ ಅವನ್ನು ನಿರ್ಲಕ್ಷಿಸಿದೆ. ಹೀಗಾಗಿ, ನ್ಯಾಯಾಲಯದ ಮೊರೆ ಹೋಗಿರುವ ಪಕ್ಷೇತರರು, ಸಂವಿಧಾನದ 36ನೇ ಕಲಂನ ಅನುಸಾರ, ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ನ್ಯಾಯಾಲಯ ಸೂಚಿಸಬೇಕೆಂದು ಕೇಳಿಕೊಂಡಿದ್ದಾರೆ.