ಬ್ಯಾಲೆನ್ಸ್ ಮಿತಿ: ವೃದ್ಧರು, ವಿದ್ಯಾರ್ಥಿಗಳಿಗೆ ವಿನಾಯ್ತಿ?
Team Udayavani, Sep 18, 2017, 8:10 AM IST
ಮುಂಬಯಿ: ಉಳಿತಾಯ ಖಾತೆಯಲ್ಲಿ ನಿಗದಿತ ಮೊತ್ತ ಕಾಯ್ದು ಕೊಳ್ಳದಿದ್ದುದಕ್ಕೆ ಎಸ್ಬಿಐ ಎಪ್ರಿಲ್ನಿಂದ ದಂಡ ವಿಧಿಸುವುದಕ್ಕೆ ಆರಂಭಿಸಿತ್ತು. ಈ ಕ್ರಮಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೆಲ ವರ್ಗದ ಗ್ರಾಹಕರಿಗೆ ವಿನಾಯಿತಿ ತೋರಲು ಚಿಂತನೆ ನಡೆಸಿದೆ. ಅವರಲ್ಲಿ ಪ್ರಮುಖರೆಂದರೆ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳು. ಸತತ 5 ವರ್ಷ ಕಾಲ ಉಳಿತಾಯ ಖಾತೆಯಲ್ಲಿ ಮೊತ್ತ ಕಾಯ್ದುಕೊಳ್ಳದೇ ಇದ್ದರೆ ದಂಡ ವಿಧಿಸುವುದರಿಂದ ವಿನಾಯಿತಿ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ಬ್ಯಾಂಕಿಂಗ್ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಗ್ರಾಹಕರಿಂದ ಹೆಚ್ಚಿನ ಪ್ರಮಾಣದಲ್ಲಿ ದೂರು ಬಂದಿತ್ತು ಎಂದಿದ್ದಾರೆ. 13 ಕೋಟಿ ಕನಿಷ್ಠ ಉಳಿತಾಯ ಖಾತೆ, ಜನಧನ ಖಾತೆ ಸಹಿತ ಒಟ್ಟು 40 ಕೋಟಿ ಉಳಿತಾಯ ಖಾತೆ ಗ್ರಾಹಕರಿದ್ದಾರೆ ಎಂದು ಹೇಳಿದ್ದಾರೆ. ನಗರ ಪ್ರದೇಶದಲ್ಲಿ ಬ್ಯಾಲೆನ್ಸ್ ಕಾಯ್ದುಕೊಳ್ಳದೇ ಇದ್ದರೆ 100 ರೂ.ದಂಡ ಮತ್ತು ಜಿಎಸ್ಟಿ, ಗ್ರಾಮೀಣ ಪ್ರದೇಶದಲ್ಲಿ 20 ರೂ.ಗಳಿಂದ 50 ರೂ.ವರೆಗೆ ದಂಡ ಮತ್ತು ಜಿಎಸ್ಟಿ ಸಹಿತ ದಂಡ ವಿಧಿಸಲಾಗುತ್ತದೆ.