ಗುಜರಾತ್ನಲ್ಲೂ “ಪದ್ಮಾವತಿ’ಗೆ ನಿಷೇಧ: ಸಿಎಂ ರೂಪಾಣಿ
Team Udayavani, Nov 23, 2017, 6:00 AM IST
ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನದ ಬಳಿಕ ಇದೀಗ ಗುಜರಾತ್ನಲ್ಲೂ “ಪದ್ಮಾವತಿ’ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಸಿನಿಮಾವು ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಕಾರಣ, ವಿವಾದಗಳೆಲ್ಲ ಪರಿಹಾರ ಆಗುವವರೆಗೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಗುಜರಾತ್ ಸಿಎಂ ವಿಜಯ್ ರೂಪಾಣಿ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಹರಿಯಾಣ ಸಿಎಂ ಮನೋಹರ್ಲಾಲ್ ಖಟ್ಟರ್ ಅವರು, “ಸಿಬಿಎಫ್ಸಿ ನಿರ್ಧಾರ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸುತ್ತೇವೆ’ ಎಂದು ಹೇಳಿದ್ದಾರೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಸಿನಿಮಾ ವಿವಾದಕ್ಕೆ ಸಂಬಂಧಿಸಿ 30ರೊಳಗೆ ವರದಿ ನೀಡುವಂತೆ ಸಿಬಿಎಫ್ಸಿ ಹಾಗೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಲೋಕಸಭೆ ಸಂಸದೀಯ ಸಮಿತಿ ಸೂಚಿಸಿದೆ. ಈ ನಡುವೆ, ಕರ್ಣಿ ಸೇನಾವು ಸಿನಿಮಾದ ರೀಲ್ಗಳನ್ನು ಸುಟ್ಟು ಹಾಕುವುದಾಗಿ ಹೇಳಿದೆ. ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು, ವಿವಾದ ಕುರಿತು ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.