Ramnavami ಬಂಗಾಲ ಸರಕಾರ ರಜೆ ಘೋಷಣೆ: ಗಿಮಿಕ್ ಎಂದ ಬಿಜೆಪಿ
Team Udayavani, Mar 11, 2024, 12:19 AM IST
ಕೋಲ್ಕತಾ: ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಲದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರಕಾರವು ರಾಮನವಮಿ ಹಬ್ಬದಂದು ಸಾರ್ವಜನಿಕ ರಜೆ ಘೋಷಿಸಿದೆ. ಇದು ಟಿಎಂಸಿಯ ಚುನಾವಣ ತಂತ್ರವೆಂದು ಬಿಜೆಪಿ ಆರೋಪಿಸಿದೆ.
ಎ.17ರ ರಾಮನವಮಿಯಂದು ಸರಕಾರಿ ರಜೆ ಘೋಷಿಸಿರುವುದಾಗಿ ಶನಿವಾರ ರಾಜ್ಯ ಸರಕಾರ ಅಧಿ ಸೂ ಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ಜನವರಿ 15ರಂದು ರಾಜ್ಯ ಸರಕಾರವು ರಜಾ ದಿನಗಳ ಪೈಕಿ ರಾಮನವಮಿಯನ್ನು ಬಿಟ್ಟಿರುವುದನ್ನು ನಾನು ಪ್ರಶ್ನಿಸಿದ್ದೆ. ಅದೇ ತಿಂಗಳು ಜ.22ರಂದು ರಾಮಮಂದಿರ ಉದ್ಘಾಟನೆ ದಿನವೇ ರಾಮನವಮಿಗೆ ರಜೆ ಘೋಷಿಸಬಹುದಿತ್ತು. ಆ ಎಲ್ಲ ಸಮಯವನ್ನು ಬಿಟ್ಟು ಟಿಎಂಸಿ ಸರಕಾರಕ್ಕೆ ಈಗ ರಾಮಭಕ್ತರು ನೊಂದುಕೊಂಡಿ ದ್ದಾರೆಂದು ತಿಳಿಯಿತೇ? ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಸಿಎಂ ಮಮತಾ ಬ್ಯಾನರ್ಜಿ ಅವರ ಹಿಂದೂ ವಿರೋಧಿ ಹಣೆಪಟ್ಟಿ ಕಳಚಿಕೊಳ್ಳಲು ಈ ತಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.