ಭೋಜಶಾಲಾ: ಕೇಂದ್ರಕ್ಕೆ ನೋಟಿಸ್
Team Udayavani, May 13, 2022, 6:18 AM IST
ಭೋಪಾಲ್: ಮಧ್ಯಪ್ರದೇಶದ ಧರ್ ಜಿಲ್ಲೆಯ ಭೋಜಶಾಲಾದಲ್ಲಿ ಹಿಂದೂಗಳಿಗೆ ಪ್ರತಿನಿತ್ಯ ಪೂಜೆಗೆ ಅವಕಾಶ ಕೊಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಬುಧವಾರದಂದು ಭಾರತೀಯ ಪ್ರಾಚ್ಯವಸ್ತು ಸಂಶೋಧನ ಇಲಾಖೆ (ಎಎಸ್ಐ), ಕೇಂದ್ರ ಸರಕಾರ ಮತ್ತು ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್ ಕೊಟ್ಟಿದೆ.
11ನೇ ಶತಮಾನದ ಸ್ಮಾರಕ ವಾಗಿರುವ ಭೋಜ ಶಾಲಾ ವನ್ನು ಹಿಂದೂಗಳು “ವಾಗೆªàವಿಯ ದೇಗುಲ’ (ಸರಸ್ವತಿ ದೇಗುಲ) ಎಂದು ನಂಬಿದ್ದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಯೆಂದು ನಂಬಿದ್ದಾರೆ. ಎಎಸ್ಐ ರಕ್ಷಣೆಯಲ್ಲಿರುವ ಈ ಸ್ಮಾರಕದಲ್ಲಿ ಪ್ರತೀ ಮಂಗ ಳ ವಾರ ಹಿಂದೂಗಳು ಪೂಜೆ ಸಲ್ಲಿಸಬಹುದು ಹಾಗೂ ಶುಕ್ರವಾರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬಹುದೆಂದು ಎಎಸ್ಐ 2003 ಎ. 7ರಂದು ಸ್ಥಳೀಯರಿಗೆ ಸೂಚಿಸಿತ್ತು.
ಆದರೆ ಮೇ 2ರಂದು “ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ ಸಂಘಟನೆ, ಈ ಆದೇಶದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ದಿನ ನಿತ್ಯದ ಪ್ರಾರ್ಥನೆಗೆ ಅವಕಾಶ ಕೊಡಬೇಕು ಹಾಗೂ ಇಲ್ಲಿಂದ ಲಂಡನ್ಗೆ ಕದ್ದೊಯ್ದು ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿರುವ ಸರಸ್ವತಿ ಮೂರ್ತಿಯನ್ನು ವಾಪಸು ತರುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕು’ ಎಂದು ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಹಾಗೂ ಎಎಸ್ಐಗೆ ನೋಟಿಸ್ ಜಾರಿಯಾಗಿದೆ.
“ಭೋಜಶಾಲಾ ಹಿಂದೂಗಳಿಗೆ ಸೇರಿದ ದೇವಸ್ಥಾನ ವಾಗಿದ್ದು, ಅಲ್ಲಿ ಪ್ರತೀ ದಿನ ಪೂಜೆ ಸಲ್ಲಿಸಲು ಹಿಂದೂ ಗಳಿಗೆ ಮಾತ್ರವೇ ಮೂಲಭೂತ ಹಕ್ಕಿದೆ. ಮುಸ್ಲಿಂ ಸಮುದಾಯದವರಿಗೆ ಈ ಸ್ಥಳದಲ್ಲಿ ಧಾರ್ಮಿಕ ಕಾರ್ಯಾಚರಣೆ ನಡೆಸಲು ಯಾವುದೇ ಹಕ್ಕಿಲ್ಲ. ಪಿಐಎಲ್ನಲ್ಲಿ ಸಂಘಟನೆ ತನ್ನ ವಾದ ಮಂಡಿಸಿದೆ.
ಮಥುರಾ ನ್ಯಾಯಾಲಯಕ್ಕೆ 4 ತಿಂಗಳ ಕಾಲಾವಕಾಶ :
ಲಕ್ನೋ: ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧ ಪಟ್ಟಂತ ಎಲ್ಲ ಅರ್ಜಿಗಳನ್ನು ಇತ್ಯರ್ಥ ಮಾಡಲು ಮಥುರಾ ನ್ಯಾಯಾಲಯಕ್ಕೆ ಅಲಹಾಬಾದ್ ಹೈಕೋರ್ಟ್ 4 ತಿಂಗಳುಗಳ ಕಾಲಾವಕಾಶ ಕೊಟ್ಟಿದೆ.
ಹಿಂದೂ ಸೇನಾ ಮುಖ್ಯಸ್ಥ ಮನೀಶ್ ಯಾದವ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿರುವ ಏಕಸದಸ್ಯ ನ್ಯಾಯಪೀಠವು ಈ ಸೂಚನೆ ಕೊಟ್ಟಿದೆ. ಶಾಹಿ ಈದ್ಗಾ ಮಸೀದಿಯು ಮಥುರಾದ ಕೃಷ್ಣ ಜನ್ಮಭೂಮಿ ಸ್ಥಳದಲ್ಲಿದೆ ಎನ್ನುವ ಬಗ್ಗೆ ವಿವಾದವಿದೆ. ಹಿಂದೂಗಳ ಪ್ರಕಾರ ಮೊಗಲ್ ಚಕ್ರವರ್ತಿ ಔರಂಗಜೇಬ್ ಕೃಷ್ಣನ ಜನ್ಮಭೂಮಿಯಲ್ಲಿ ಮಸೀದಿ ನಿರ್ಮಿಸಿದ. ಹಾಗಾಗಿ ಈ ಮಸೀದಿ ತೆರವು ಮಾಡಬೇಕೆಂದು ಹಲವು ಅರ್ಜಿಗಳು ಮಥುರಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ.