ಹಿಂದುಳಿದವರಿಗೆ ಅನ್ಯಾಯವಾಗದಂತೆ ಚುನಾವಣೆ ಎದುರಿಸುತ್ತೇವೆ: ಕೋಟ ಶ್ರೀನಿವಾಸ ಪೂಜಾರಿ
Team Udayavani, May 13, 2022, 6:20 AM IST
ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗದಹಾಗೆ ಚುನಾವಣೆ ಮಾಡುವುದು ನಮ್ಮ ಸರ್ಕಾರ ಹಾಗೂ ಪಕ್ಷದ ನಿಲುವು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ಈ ವಿಚಾರದಲ್ಲಿ ಎರಡು ಬಾರಿ ಸರ್ವ ಪಕ್ಷ ಸಭೆ ಮಾಡಿದ್ದೇವೆ. ಅಲ್ಲದೇ ಮತ್ತೆ ಸರ್ವಪಕ್ಷ ಸಭೆ ಕರೆಯುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಕಡ್ಡಾಯ ಅನುಮತಿ ಪಡೆಯುವಂತೆ ಸರ್ಕಾರ ಮಾರ್ಗಸೂಚಿ ಮಾಡಿರುವುದರಿಂದ ರಾತ್ರಿ ಸಮಯದಲ್ಲಿ ನಡೆಯುವ ಯಕ್ಷಗಾನ ನಡೆಸಲು ತೊಂದರೆಯಾಗುತ್ತದೆ ಎಂಬ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಯಕ್ಷಗಾನ ಒಂದೇ ಸ್ಥಳದಲ್ಲಿ, ಒಂದೇ ಊರಿನಲ್ಲಿ ನಡೆಯುವುದಿಲ್ಲ. ಎಲ್ಲಾ ಕಡೆ ಜಿಲ್ಲಾಧಿಕಾರಿಗಳ ಅನುಮತಿ ತೆಗೆದುಕೊಂಡು ಮಾಡಬೇಕು. ಹೊಸ ಮಾರ್ಗಸೂಚಿಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆಯನ್ನು ಪರಿಷತ್ತಿನಲ್ಲಿ ಅಂಗೀಕಾರ ಪಡೆಯಲು ಬಹುಮತದ ಕೊರತೆಯಿಂದ ವಿಳಂಬವಾಗಿತ್ತು. ಆ ಕಾರಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.