BJPಯಿಂದ blackmail: ದಿಲ್ಲಿಯಲ್ಲಿ ಡಿಕೆ ಸುರೇಶ್ ಸುದ್ದಿಗೋಷ್ಠಿ
Team Udayavani, Feb 7, 2019, 6:08 AM IST
ಹೊಸದಿಲ್ಲಿ : ರಾಜ್ಯದಲ್ಲಿನ ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರಕಾರವನ್ನು ಬೀಳಿಸುವ ಆಪರೇಶನ್ ಕಮಲ ರಣತಂತ್ರ ಈಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಸಂಚಲನ ಮೂಡಿಸಿದೆ.
‘ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ಮತ್ತು ರಾಜ್ಯ ಬಿಜೆಪಿ ನಾಯಕರ ನಡೆಯು, ಸಮ್ಮಿಶ್ರ ಸರಕಾರವನ್ನು ಬೀಳಿಸುವ ಏಕೈಕ ಗುರಿ ಹೊಂದಿರುವುದು ಸ್ಪಷ್ಟವಿದೆ’ ಎಂದು ರಾಜ್ಯದ ಕಾಂಗ್ರೆಸ್ ಸಂಸದರು ಇಂದಿಲ್ಲಿ ದಿಢೀರ್ ಪತ್ರಿಕಾ ಗೋಷ್ಠಿ ಕರೆದು, ಬಿಜೆಪಿ ಕುತಂತ್ರವನ್ನು ಕಟುವಾಗಿ ಟೀಕಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಬಲವಂತದಿಂದ ಕದ್ದುಮುಚ್ಚಿ ಮುಂಬಯಿಗೆ ಕರೆದೊಯ್ದು ಅಲ್ಲಿನ ಹೊಟೇಲ್ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ; ಮಾತ್ರವಲ್ಲ ತಮ್ಮ ಒತ್ತೆಯಲ್ಲಿರುವ ಆ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ; ಇದಕ್ಕೆ ಮಹಾರಾಷ್ಟ್ರ ಸರಕಾರ ಕೂಡ ಸಾಥ್ ನೀಡುತ್ತಿದೆ’ ಎಂದು ಆರೋಪಿಸಿದರು.