ಚೀನದ ಆಕ್ರಮಣಕ್ಕೆ ಸಾಕ್ಷ್ಯಗಳಿಲ್ಲ: ಡ್ರ್ಯಾಗನ್ ಪರ ನಿಂತ ಸಿಪಿಎಂ ನಾಯಕ ಮಾಣಿಕ್ ಸರಕಾರ್
1960ರ ಚೀನ ದಾಳಿ ತಡೆಗೆ ಸೇನೆಗೆ ಸಾಧ್ಯವಾಗಿರಲಿಲ್ಲವಂತೆ; ಡ್ರ್ಯಾಗನ್ ಸೇನೆಯೇ ಸ್ವಯಂ ಪ್ರೇರಿತವಾಗಿ ಗಡಿ ಬಿಟ್ಟು ತೆರಳಿತ್ತು
Team Udayavani, Apr 6, 2022, 7:30 AM IST
ಅಗರ್ತಲಾ: “ಚೀನ ಭಾರತದ ಗಡಿಯನ್ನು ವಶಪಡಿಸಿಕೊಂಡಿದೆ ಎನ್ನುವುದಕ್ಕೆ ಆರೋಪವೇ ಇಲ್ಲ’ ಹೀಗೆಂಬ ಹೊಸ ವಾದ ಮಂಡಿಸಿದ್ದು ಸಿಪಿಎಂನ ಹಿರಿಯ ನಾಯಕ, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ (73). ಇತ್ತೀಚೆಗೆ ಅಗರ್ತಲಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
“ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡಿದ್ದ ನಮ್ಮ ಸಹೋದರರೊಬ್ಬರು ಚೀನ ಮತ್ತು ನಮ್ಮ ದೇಶದ ಜತೆಗೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡಿದ್ದರು. ಹಲವು ವರ್ಷಗಳಿಂದ ಭಿನ್ನಾಭಿಪ್ರಾಯ ಇರುವುದು ನಿಜ ಮತ್ತು ಅದನ್ನು ಸರಿಪಡಿಸಲು ಮಾತುಕತೆಗಳು ನಡೆಯುತ್ತಲೇ ಇವೆ. ಆದರೆ, ಚೀನ ಮತ್ತೊಂದು ದೇಶ (ಭಾರತದ) ಗಡಿಯನ್ನು ದಾಟಿ ಅದರ ನೆಲ ವಶಪಡಿಸಿಕೊಂಡಿದೆ ಎಂಬುದಕ್ಕೆ ಯಾವುದೇ ಆಧಾರಗಳು ಇಲ್ಲ’ ಎಂದು ಹೇಳಿದ್ದಾರೆ.
ಅವರೇ ವಾಪಸಾದರು:
1960ರಲ್ಲಿ ಚೀನ ಸೇನೆ ದೇಶದ ನೆಲದೊಳಕ್ಕೆ ಬಂದಿದ್ದರೂ ನಮ್ಮ ಸೇನೆಗೆ ಅವರನ್ನು ತಡೆಯಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ ಹಿರಿಯ ಮುಖಂಡ!.
ನಮ್ಮ ದೇಶದ ಗಡಿಯನ್ನು ಬಿಟ್ಟು ಅವರಾಗಿಯೇ ತೆರಳಿದ್ದರು. ಗಡಿ ಬಿಟ್ಟು ತೆರಳಿ ಎಂದು ಅವರಿಗೆ ಯಾರೂ ದುಂಬಾಲು ಬಿದ್ದಿರಲಿಲ್ಲ.
ಚೀನದವರು ಕೇವಲ ತಮ್ಮ ಶಕ್ತಿ ಪ್ರದರ್ಶಿಸಲು ಮಾತ್ರ ಬಂದಿದ್ದರು ಎಂಬ ಹೊಸ ವಾದ ಮುಂದಿಟ್ಟಿದ್ದಾರೆ.
ಇದನ್ನೂ ಓದಿ:ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಸಚಿವ ಚವ್ಹಾಣ
ಗಡಿ ಇದ್ದರೆ ವಿವಾದ:
2 ದೇಶಗಳ ನಡುವೆ ಗಡಿ ಇದ್ದರೆ ವಿವಾದ ಇದ್ದೇ ಇರುತ್ತದೆ ಎಂಬ ಮಾತು ಮಾಣಿಕ್ ಸರ್ಕಾರ್ ಅವರದ್ದು. ಮುಂದೆ ಏನಾಗುತ್ತದೋ ನೋಡೋಣ. ಭೂದಾನ ಚಳವಳಿಯ ನೇತೃತ್ವ ವಹಿಸಿದ್ದ ವಿನೋಭಾ ಭಾವೆ ಕಮ್ಯೂನಿಸ್ಟ್ ಆಗಿರಲಿಲ್ಲ. ಸಮಾಜವಾದಿಗಳತ್ತ ಮತ್ತು ಎಡಪಂಥೀಯರತ್ತ ನೋಡಿ, ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಮಾಜಿ ಮುಖ್ಯಮಂತ್ರಿ ವಾದಿಸಿದ್ದಾರೆ.