ಪುಲ್ವಾಮಾ ಬಾಂಬರ್ಗೆ ತರಬೇತಿ ನೀಡಿದ್ದು ಮಸೂದ್ ಅಜರ್ನ ಸಹೋದರ !
Team Udayavani, Feb 20, 2019, 10:59 AM IST
ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಯ ಸಂಪೂರ್ಣ ಕಾರ್ಯಾಚರಣೆಯ ಹೊಣೆಗಾರಿಕೆ ಮತ್ತು ಉಸ್ತುವಾರಿ ವಹಿಸಿಕೊಂಡವನು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನ ಸಹೋದರ ಇಬ್ರಾಹಿಂ ಅಜರ್ ಎಂಬುದು ಇದೀಗ ಗೊತ್ತಾಗಿದೆ.
ಪುಲ್ವಾಮಾ ಉಗ್ರ ದಾಳಿಯ ಆತ್ಮಾಹುತಿ ಬಾಂಬರ್ 21ರ ಹರೆಯದ ಆದಿಲ್ ಅಹ್ಮದ್ ದಾರ್ ಗೆ ತರಬೇತಿ ನೀಡಿದವನು ಮತ್ತು 1999ರಲ್ಲಿ 176 ಪ್ರಯಾಣಿಕರು ಮತ್ತು 15 ಸಿಬಂದಿಗಳಿದ್ದ ಇಂಡಿಯನ್ ಏರ್ ಲೈನ್ಸ್ 814 ವಿಮಾನವನ್ನು ಕಂದಹಾರ್ ಗೆ ಹೈಜಾಕ್ ಮಾಡಿದವನು ಕೂಡ ಇದೇ ಜೈಶ್ ಉಗ್ರ ಇಬ್ರಾಹಿಂ ಅಜರ್ !
ಪುಲ್ವಾಮಾ ಉಗ್ರ ದಾಳಿಗೆ ದಾರ್ ನನ್ನು ಆಯ್ಕೆ ಮಾಡಲಾದದ್ದು ದಾಳಿಯ ಮಾಸ್ಟರ್ ಮೈಂಡ್ಗಳು ಮತ್ತು ಉನ್ನತ ಜೆಇಎಂ ಉಗ್ರರಾದ ಕಮ್ರಾನ್ ಮತ್ತು ಅಬ್ದುಲ್ ರಶೀದ್ ಅಲಿಯಾಸ್ ಗಾಜಿ ಅವರ ಸಮ್ಮುಖದಲ್ಲಿ – ಲಾಟರಿ ಎತ್ತುವ ಮೂಲಕ !
ಹೀಗೆ ಆಯ್ಕೆಯಾದ ದಾರ್ ನನ್ನು ಆ ಬಳಿಕ ಸ್ಫೋಟಕ ತುಂಬಿದ ವಾಹನವನ್ನು ಚಲಾಯಿಸಿ ಆತ್ಮಾಹುತಿ ದಾಳಿ ಮಾಡುವುದು ಹೇಗೆಂಬ ಬಗ್ಗೆ ಕಮ್ರಾನ್ ತರಬೇತಿ ನೀಡಿದ್ದ; ಕಮ್ರಾನ್ ಫೆ.18ರಂದು ಭಾರತೀಯ ಪಡೆಯಿಂದ ಎನ್ಕೌಂಟರ್ನಲ್ಲಿ ಹತನಾದ. ಕಮ್ರಾನ್ ಈಗೊಂದು ವರ್ಷದಿಂದ ಸಕ್ರಿಯನಾಗಿದ್ದ; ಆತ ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆಗಳ ಕಮಾಂಡರ್ ಆಗಿದ್ದ.
ಆತ್ಮಾಹುತಿ ಬಾಂಬರ್ ದಾರ್ ನ ತರಬೇತಿಯ ಸಂಪೂರ್ಣ ಉಸ್ತುವಾರಿ ನಡೆಸಿದವನು ಇಬ್ರಾಹಿಂ ಅಜರ್; ಮತ್ತು ಕಳೆದ ವರ್ಷ ಅಕ್ಟೋಬರ್ 30ರಂದು ಭದ್ರತಾ ಪಡೆಗಳಿಂದ ಹತನಾಗಿದ್ದ ಉಗ್ರ ಮೊಹಮ್ಮದ್ ಉಸ್ಮಾನ್ ನ ಅಪ್ಪ ! ಪುಲ್ವಾಮಾ ಉಗ್ರ ದಾಳಿ ಯಶಸ್ವಿಯಾಗಿ ನಡೆದ ಬಳಿಕ ಇಬ್ರಾಹಿಂ ಅಜರ್ ಪಾಕಿಸ್ಥಾನಕ್ಕೆ ಪರಾರಿಯಾಗಿದ್ದಾನೆ.
ಪುಲ್ವಾಮಾ ಉಗ್ರ ದಾಳಿಯನ್ನು ಫೆ.9ರಂದು ಅಫ್ಜಲ್ ಗುರುವಿನ ಮರಣ ವರ್ಷಾಚರಣೆಯ ದಿನದಂದೇ ನಡೆಸುವುದು ಜೆಇಎಂ ಗುರಿಯಾಗಿತ್ತು. ಆದರೆ ಅಂದು ವಿಪರೀತ ಹಿಮಪಾತವಾಗುತ್ತಿದ್ದುದರಿಂದ ಫೆ.14ರಂದು ದಾಳಿಯನ್ನು ಕೈಗೊಳ್ಳಲಾಯಿತು.