ರಾಜಸ್ಥಾನದಲ್ಲೂ ಕಾಂಗ್ರೆಸ್ ಜತೆ ಬಿಎಸ್ಪಿ ಮೈತ್ರಿ ಇಲ್ಲ?
Team Udayavani, Sep 22, 2018, 6:00 AM IST
ಲಕ್ನೋ: ಮುಂದಿನ ಲೋಕಸಭೆ ಚುನಾವಣೆಗೆ ಮಹಾಮೈತ್ರಿ ಕೂಟದ ಮಾತಾಡಿದ್ದ ಬಿಎಸ್ಪಿ ನಾಯಕಿ ಮಾಯಾವತಿ ಅದರಿಂದ ಹಿಂದೆ ಸರಿದಂತಿದೆ. ಬುಧವಾರ ನಡೆದಿದ್ದ ಬೆಳವಣಿಗೆಯಲ್ಲಿ ಛತ್ತೀಸ್ಗಢ ವಿಧಾನಸಭೆ ಚುನಾವಣೆಗಾಗಿ ಮಾಜಿ ಸಿಎಂ ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಛತ್ತೀಸ್ಗಢ ಜತೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ರಾಜಸ್ಥಾನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಎಡಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ.
ಈ ಬಗ್ಗೆ ಸಿಪಿಐ ನಾಯಕ ಅತುಲ್ ಕುಮಾರ್ ಅಂಜನ್ “ನ್ಯೂಸ್ 18′ ಸುದ್ದಿವಾಹಿನಿಗೆ ಖಚಿತಪಡಿಸಿದ್ದಾರೆ. “ಎಡಪಕ್ಷಗಳು ಜೆಡಿಎಸ್, ಎಸ್ಪಿ ಜತೆಗೆ ಸೇರಿ ತೃತೀಯ ರಂಗ ರಚಿಸಿಕೊಂಡಿವೆ. ಬಿಎಸ್ಪಿ ಅದಕ್ಕೆ ಸೇರ್ಪಡೆಗೊಂಡರೆ ಸಂತೋಷಗೊಳ್ಳುತ್ತೇವೆ’ ಎಂದಿದ್ದಾರೆ. ಮೂಲಗಳ ಪ್ರಕಾರ ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಬಿಎಸ್ಪಿ ಜತೆಗೆ ಮೈತ್ರಿ ಬಯಸಿತ್ತಾದರೂ, ರಾಜಸ್ಥಾನದಲ್ಲಿ ಆ ಪಕ್ಷದ ಜತೆಗೆ ಮೈತ್ರಿಗೆ ಮುಂದಾಗಿಲ್ಲ. ಇದನ್ನು ಆರ್ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಕೂಡ ವಿರೋಧಿಸಿದ್ದಾರೆ. ಜೆಸಿಸಿ ಜತೆಗೆ ಬಿಎಸ್ಪಿ ಮಾಡಿರುವ ಒಪ್ಪಂದ ಬಿಜೆಪಿಗೆ ಅನುಕೂಲ ಮಾಡಿಕೊಡಲಿದೆ ಎಂದು ಛತ್ತೀಸ್ಗಡ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.