ಸೆಂಟ್ರಲ್ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ
ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ವಿವರಣೆ
Team Udayavani, Dec 3, 2021, 6:20 AM IST
ನವದೆಹಲಿ: ಸೆಂಟ್ರಲ್ ವಿಸ್ತಾ ಕಾಮಗಾರಿಯಲ್ಲಿ ಯಾವುದೇ ರೀತಿಯಲ್ಲಿ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳಲಾಗುತ್ತಿದೆ. ನಿರ್ಮಾಣ ಮತ್ತು ಉರುಳಿಸುವಿಕೆ ತ್ಯಾಜ್ಯ ನಿರ್ವಹಣೆ ನಿಯಮವನ್ನು ಪರಿಪಾಲಿಸಲಾಗುತ್ತಿದೆ ಎಂದು ಬುಧವಾರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ದೆಹಲಿಯಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ? ವಿಸ್ತಾ ಕಾಮಗಾರಿಯಲ್ಲಿ ಮಾಲಿನ್ಯ ತಡೆ ಹೇಗಾಗುತ್ತಿದೆ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ್ದ ನ್ಯಾಯಾಲಯ, ಅದರ ಬಗ್ಗೆ ಮಾಹಿತಿ ಕೊಡಲು ಕೇಂದ್ರಕ್ಕೆ ಕೇಳಿತ್ತು. ಆ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಿರುವ ಸರ್ಕಾರ, ವಿಸ್ತಾ ಕಾಮಗಾರಿಯಲ್ಲಿ ಮಾಲಿನ್ಯವಾಗದಂತೆ ತಡೆಯಲು ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡಿದೆ.
ಇದೇ ವೇಳೆ, ಸೆಂಟ್ರಲ್ ವಿಸ್ತಾ ಅವೆನ್ಯೂ ಕಾಮಗಾರಿಯು ಡೆಡ್ಲೈನ್ ಒಳಗೆ ಮುಗಿಯುವುದಿಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗೆ ಸೆಂಟ್ರಲ್ ವಿಸ್ತಾ ಅವೆನ್ಯೂ ಯೋಜನೆಯಲ್ಲಿ ವಿವಿಧ ಕಾಮಗಾರಿ ಆರಂಭಿಸಲಾಗಿದ್ದು, ಅದನ್ನು 2021ರ ಡಿಸೆಂಬರ್ನಲ್ಲಿ ಮುಗಿಸುವುದಾಗಿ ಹೇಳಲಾಗಿತ್ತು. ಆದರೆ ಈಗಿನ್ನೂ ಕೇವಲ ಶೇ. 60 ಕಾಮಗಾರಿ ಪೂರ್ಣಗೊಂಡಿದೆ ಎನ್ನಲಾಗಿದೆ. ಹಾಗೆಯೇ ಸೆಂಟ್ರಲ್ ವಿಸ್ತಾ ಕಾಮಗಾರಿಯ ಶೇ. 35 ಸಂಪೂರ್ಣಗೊಂಡಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ
ದೆಹಲಿ ಸರ್ಕಾರದ ವಿರುದ್ಧ “ಸುಪ್ರೀಂ’ ಗರಂ
“ಮಾಲಿನ್ಯ ಪರಿಸ್ಥಿತಿಯನ್ನು ನೀವು ನಿಭಾಯಿಸುತ್ತೀರೋ ಇಲ್ಲವೋ ಹೇಳಿಬಿಡಿ. ನಿಮ್ಮಲ್ಲಿ ಕೈಯ್ಯಲ್ಲಿ ಸಾಧ್ಯವಾಗುವುದಿಲ್ಲ ಎಂದಾದಾರೆ ನಾವು ನಿಮ್ಮ ಸರ್ಕಾರವನ್ನು ಮುನ್ನಡೆಸಲು ಬೇರೊಬ್ಬರನ್ನು ತಂದು ಕೂರಿಸುತ್ತೇವೆ’. ಹೀಗೆಂದು ದೆಹಲಿ ಸರ್ಕಾರದ ಮೇಲೆ ಸುಪ್ರೀಂ ಕೋರ್ಟ್ ಕೆಂಡ ಕಾರಿದೆ. ತಿಂಗಳುಗಳು ಉರುಳುತ್ತಿದ್ದರೂ ಮಹಾನಗರದ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವಲ್ಲಿ ದೆಹಲಿ ಸರ್ಕಾರ ಕೈಗೊಂಡ ಕ್ರಮಗಳಾÂವೂ ಸಾರ್ಥಕವಾಗಿಲ್ಲ ಎಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರುಳ್ಳ ನ್ಯಾಯಪೀಠ, “ಮಾಲಿನ್ಯ ನಿಯಂತ್ರಣಕ್ಕೆ ನೀವು ಕೈಗೊಂಡಿರುವ ಕ್ರಮಗಳು ಸಮಾಧಾನಕರವಾಗಿಲ್ಲ. ಬೇಗನೇ ಒಂದು ಪರಿಣಾಮಕಾರಿ ನಿಯಂತ್ರಣಾ ಕ್ರಮಗಳ ಪಟ್ಟಿಯನ್ನು ನಮಗೆ ಸಲ್ಲಿಸಿ. ಇಲ್ಲವಾದರೆ ನಿಮ್ಮ ಸರ್ಕಾರ ಮುನ್ನಡೆಸಲು ನಾವು ಬೇರೆಯವರನ್ನು ತಂದು ಕೂರಿಸಬೇಕಾಗುತ್ತದೆ’ ಎಂದು ಹೇಳಿದೆ.