ಗಣರಾಜ್ಯೋತ್ಸವ ಪರೇಡ್; ಪಶ್ಚಿಮಬಂಗಾಳದ ಟ್ಯಾಬ್ಲೋ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ
ಪಶ್ಚಿಮಬಂಗಾಳ ಸರ್ಕಾರದ ಟ್ಯಾಬ್ಲೋ ಪ್ರಸ್ತಾಪವನ್ನು ತಜ್ಞರ ಸಮಿತಿ ಎರಡು ಬಾರಿ ಸಭೆ ನಡೆಸಿ ಪರಿಶೀಲನೆ ನಡೆಸಿತ್ತು.
Team Udayavani, Jan 2, 2020, 10:48 AM IST
ಕೋಲ್ಕತಾ:ಜನವರಿ 26ರಂದು ರಾಷ್ಟ್ರರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪಶ್ಚಿಮಬಂಗಾಳದ ಟ್ಯಾಬ್ಲೋ(ಸ್ತಬ್ದಚಿತ್ರ) ಪ್ರದರ್ಶಿಸುವ ಪ್ರಸ್ತಾಪವನ್ನು ಕೇಂದ್ರ ರಕ್ಷಣಾ ಸಚಿವಾಲಯ ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಂತಾಗಿದೆ.
ಪಶ್ಚಿಮಬಂಗಾಳ ಸರ್ಕಾರದ ಟ್ಯಾಬ್ಲೋ ಪ್ರಸ್ತಾಪವನ್ನು ತಜ್ಞರ ಸಮಿತಿ ಎರಡು ಬಾರಿ ಸಭೆ ನಡೆಸಿ ಪರಿಶೀಲನೆ ನಡೆಸಿತ್ತು. ಪಶ್ಚಿಮಬಂಗಾಳದ ಟ್ಯಾಬ್ಲೋ ಪ್ರದರ್ಶನದ ಪ್ರಸ್ತಾಪವನ್ನು ಪರಿಗಣಿಸದಿರಲು ಸಮಿತಿ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ತಬ್ದಚಿತ್ರ ಪ್ರದರ್ಶನಕ್ಕಾಗಿ 16 ರಾಜ್ಯಗಳ 22 ಪ್ರಸ್ತಾವನೆ ಹಾಗೂ ಕೇಂದ್ರಾಡಳಿತ ಪ್ರದೇಶ, ಆರು ಸಚಿವಾಲಯಗಳ ಮತ್ತು ಇಲಾಖೆಗಳ ಸ್ತಬ್ದಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಒಟ್ಟು 56 ಟ್ಯಾಬ್ಲೋ ಪ್ರದರ್ಶನಗೊಳ್ಳಲಿದ್ದು, ಕೇಂದ್ರಾಡಳಿತ ಮತ್ತು ರಾಜ್ಯಗಳಿಂದ 32, ವಿವಿಧ ಸಚಿವಾಲಯ ಮತ್ತು ಇಲಾಖೆಗಳ 24 ಸ್ತಬ್ದ ಚಿತ್ರ ಸೇರಿದೆ.