ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ
Team Udayavani, Jan 28, 2023, 8:04 PM IST
ಜೈಪುರ: ಸಮಾಜದಲ್ಲಿ ತುಳಿತಕ್ಕೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಶನಿವಾರ ಆಯೋಜಿಸಿದ್ದ ಗುಜ್ಜಾರ್ ಸಮುದಾಯದ ಆರಾಧ್ಯ ದೈವ ಶ್ರೀ ದೇವನಾರಾಯಣ್ ಅವರ 1,111 ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಜಗ್ಗತ್ತು ಅತ್ಯಂತ ಭರವಸೆಯಿಂದ ಭಾರತದತ್ತ ನೋಡುತ್ತಿದೆ. ದೇಶ ಕೂಡ ತನ್ನ ಶಕ್ತಿ ಮತ್ತು ಸಾಮರ್ಥಯವನ್ನು ಪ್ರದರ್ಶಿಸಿದೆ. ಇಂದು ಜಾಗತಿಕ ವೇದಿಕೆಯಲ್ಲಿ ಭಾರತ ತನ್ನದೇ ಸ್ಥಾನವನ್ನು ಹೊಂದಿದೆ. ಅಲ್ಲದೆ, ಇತರೆ ದೇಶಗಳ ಮೇಲಿನ ಅವಲಂಬನೆಯೂ ತಗ್ಗುತ್ತಿದೆ,’ ಎಂದರು.
“ದೇಶದ ಭವ್ಯ ಪರಂಪರೆ ಬಗ್ಗೆ ನಾವು ಹೆಮ್ಮೆ ಹೊಂದಿರಬೇಕು. ಗುಲಾಮಿ ಮನಸ್ಥಿತಿಯಿಂದ ದೂರವಾಗಬೇಕು. ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ನೆನಪಿರಬೇಕು,’ ಎಂದು ಪ್ರತಿಪಾದಿಸಿದರು.
“ಗುಜ್ಜಾರ್ ಸಮುದಾಯವು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ದೇಶದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದೆ,’ ಎಂದು ಪ್ರಧಾನಿ ಮೋದಿ ಹೇಳಿದರು.