ಕೋವಿಡ್: 30 ದಿನದೊಳಗೆ ಸಂತ್ರಸ್ತರಿಗೆ ಪರಿಹಾರ
ಮೃತರ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡುವ ಸೂತ್ರಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ
Team Udayavani, Oct 5, 2021, 6:20 AM IST
ಹೊಸದಿಲ್ಲಿ: ಕೋವಿಡ್ದಿಂದ ಮೃತಪಟ್ಟಿರುವವರ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವ ಕೇಂದ್ರ ಸರಕಾರದ ಸೂತ್ರಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ಅರ್ಜಿ ಸಲ್ಲಿಕೆಯಾದ 30 ದಿನಗಳ ಒಳಗಾಗಿ ಪರಿಹಾರ ಮೊತ್ತವನ್ನು ಸಂಬಂಧಿ ತರಿಗೆ ನೀಡಬೇಕು. ರಾಜ್ಯ ಸರಕಾರಗಳು ತಮ್ಮ ವಿಪತ್ತು ಪರಿಹಾರ ನಿಧಿಯಿಂದ ಈ ಮೊತ್ತ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಮಾಧ್ಯಮಗಳಲ್ಲಿ ಪರಿಹಾರ ನೀಡುವ ಯೋಜನೆ ಬಗ್ಗೆ ಭಾರಿ ಪ್ರಚಾರ ನೀಡಬೇಕು. ಮರಣ ಪ್ರಮಾಣ ಪತ್ರದಲ್ಲಿ ಸಾವಿಗೆ ಕಾರಣ ನಮೂದು ಮಾಡದೇ ಇದ್ದರೂ, ಪರಿಹಾರ ಮೊತ್ತ ನಿರಾಕರಿಸುವಂತಿಲ್ಲ ಎಂದೂ ಸೂಚಿಸಿದೆ.
3ನೇ ಅಲೆ ಭಯವಿಲ್ಲ: ಈ ನಡುವೆ, ವಾಣಿಜ್ಯ ನಗರಿ ಮುಂಬಯಿಯಲ್ಲಿ ಲಸಿಕೆ ಅಭಿಯಾನ ಉತ್ತಮವಾಗಿ ಸಾಗುತ್ತಿದ್ದು, ಕೋವಿಡ್ 3ನೇ ಅಲೆಯ ಭಯವಿಲ್ಲ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಬಾಂಬೆ ಹೈಕೋರ್ಟ್ಗೆ ಹೇಳಿದೆ. ನಾವು ಈಗಾಗಲೇ 82 ಲಕ್ಷ ಜನರಿಗೆ ಮೊದಲ ಡೋಸ್ ಹಾಗೂ 42 ಲಕ್ಷ ಜನರಿಗೆ ಎರಡೂ ಡೋಸ್ ಲಸಿಕೆ ನೀಡಿದ್ದೇವೆ ಎಂದೂ ತಿಳಿಸಿದೆ. ಇನ್ನು, ಸೋಮವಾರದಿಂದ ರಾಜ್ಯದ ಗ್ರಾಮೀಣ ಪ್ರದೇಶದ 5ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ನಗರ ಪ್ರದೇಶದ 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನೂ ಆರಂಭಿಸಲಾಗಿದೆ. 18 ತಿಂಗಳ ಬಳಿಕ ವಿದ್ಯಾರ್ಥಿಗಳು ಶಾಲೆಗಳತ್ತ ಮುಖಮಾಡಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಕಸಗುಡಿಸುವ ವೀಡಿಯೋ ವೈರಲ್!
ಕೇರಳದಿಂದ ಹೊಸ ನಿಯಮ: ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಸ್ವಲ್ಪಮಟ್ಟಿಗೆ ತಗ್ಗುತ್ತಿರುವ ನಡುವೆಯೇ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದ ಹೊಸ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಯುಕೆಯಿಂದ ಬರುವ ಪ್ರವಾಸಿಗರಿಗೆ 10 ದಿನ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಯುರೋಪ್ಗ್ಳಿಂದ ಬರುವವರಿಗೆ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಜತೆಗೆ ವಿದೇಶದಿಂದ ಬರುವವರೆಲ್ಲರೂ 3 ಹಂತದ ಆರ್ಟಿ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂದೂ ಸೂಚಿಸಲಾಗಿದೆ.
ಲಸಿಕೆ ಹೊತ್ತೊಯ್ಯುವ “ಐ ಡ್ರೋನ್’ಗೆ ಚಾಲನೆ
ದೇಶದ ಈಶಾನ್ಯ ರಾಜ್ಯಗಳ ಮೂಲಸೌಕರ್ಯಗಳಿಲ್ಲದ ಪ್ರದೇಶಗಳಿಗೆ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ನಿರ್ಮಿಸಿರುವ ಐ ಡ್ರೋನ್ಗೆ ಸೋಮವಾರ ಕೇಂದ್ರ ಸರಕಾರ ಚಾಲನೆ ನೀಡಿದೆ. ಭಾರತ ಭೌಗೋಳಿಕವಾಗಿ ವೈವಿಧ್ಯತೆಯಿರುವ ರಾಷ್ಟ್ರ. ಡ್ರೋನ್ ಮೂಲಕ ತುತ್ತ ತುದಿಯಲ್ಲಿರುವ ಊರಿಗೂ ಅಗತ್ಯ ವಸ್ತು ಕಳುಹಿಸಬಹುದು. ಈ ಡ್ರೋನ್ ವೈದ್ಯಕೀಯ ಅಗತ್ಯತೆಗಳನ್ನು ಕಳುಹಿಸಿಕೊಡಲು ಹಾಗೂ ಅಲ್ಲಿಂದ ರಕ್ತದ ಮಾದರಿ ತರಿಸಿಕೊಳ್ಳಲು ಸಹಕಾರಿಯಾಗಲಿದೆ. ಇದು ಲಸಿಕೆ ಪೂರೈಕೆಯಲ್ಲಿನ ತೊಡಕಿನ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ತಿಳಿಸಿದ್ದಾರೆ.