CPI(M)ಗೆ ಕೇಂದ್ರ ಸಚಿವ ಮುರಳೀಧರನ್ ಸವಾಲು:ದೇವಸ್ವಂ ಇಲಾಖೆ ರದ್ದುಪಡಿಸಿ…
ಕೇರಳದಲ್ಲಿ ಅಯೋಧ್ಯೆ ವಿಚಾರಕ್ಕೆ ವಾಕ್ಸಮರ... ಶಬರಿಮಲೆಗೆ ಹೋಗುವುದನ್ನು ನಿಲ್ಲಿಸಲಿ...
Team Udayavani, Dec 28, 2023, 5:33 PM IST
ಹೊಸದಿಲ್ಲಿ: ‘ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಕೇರಳದ ಆಡಳಿತಾರೂಢ ಸಿಪಿಐ(ಎಂ) ಪಕ್ಷವು ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಲಾಗುತ್ತಿದೆ ಎಂದು ಹೇಳಿದ್ದು, ಹಾಗಿದ್ದರೆ ಕೇರಳ ಸರಕಾರ ದೇವಸ್ವಂ ಇಲಾಖೆಯನ್ನು ರದ್ದುಪಡಿಸಲಿ” ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ವಿ. ಮುರಳೀಧರನ್ ಗುರುವಾರ ಆಕ್ರೋಶ ಹೊರ ಹಾಕಿದ್ದಾರೆ.
“ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಆಹ್ವಾನ ಬಂದಿದ್ದರೂ, ಕಾಂಗ್ರೆಸ್ ನಿಲುವು ಏನೆಂದು ನಮಗೆ ತಿಳಿದಿಲ್ಲ, ಆದರೆ ಕೇರಳದಲ್ಲಿ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಭಾಗವಹಿಸಬಾರದು ಎಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಸಿಪಿಐ(ಎಂ) ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಲಾಗುತ್ತಿದೆ ಎಂದು ಹೇಳಿದೆ, ನಾನು ಸಿಪಿಐ(ಎಂ) ನಾಯಕರಿಗೆ ಕೇಳಲು ಬಯಸುತ್ತೇನೆ, ಅವರು ಮೊದಲು ದೇವಸ್ವಂ ಇಲಾಖೆಯನ್ನು ರದ್ದುಪಡಿಸಲಿ ಮತ್ತು ಸಿಪಿಐ(ಎಂ) ಮುಖಂಡರು ಶಬರಿಮಲೆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಲಿ” ಎಂದು ಸವಾಲು ಹಾಕಿದರು.
ಸ್ಪಷ್ಟ ಉತ್ತರ ನೀಡಬೇಕು
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಕ್ಷದ ನಾಯಕರು ಭಾಗವಹಿಸುತ್ತಾರೆಯೇ ಎಂದು ಸ್ಪಷ್ಟಪಡಿಸಬೇಕೆಂದು ಕೇರಳದ ಬಿಜೆಪಿ ಗುರುವಾರ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕವನ್ನು ಒತ್ತಾಯಿಸಿದೆ. ದೇಶದ ಅತೀ ಹಳೆಯ ಪಕ್ಷವು ಭಾಗವಹಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ, ರಾಜ್ಯದ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ.