ಕೆಂಪುಕೋಟೆ ದತ್ತು: ರೂ 25 ಕೋಟಿಗೆ ಪಾರಂಪರಿಕ ತಾಣ ನಿರ್ವಹಣೆ ಖಾಸಗಿಗೆ
Team Udayavani, Apr 29, 2018, 6:00 AM IST
ಹೊಸದಿಲ್ಲಿ: ಹದಿನೇಳನೇ ಶತಮಾನದ ಹಾಗೂ ಮೊಘಲ್ ಸಾಮ್ರಾಜ್ಯಕ್ಕೆ ಸೇರಿದ್ದ ಐತಿಹಾಸಿಕ ಕಟ್ಟಡ ಕೆಂಪುಕೋಟೆಯನ್ನು ಖಾಸಗಿ ಕಂಪನಿಯೊಂದು ದತ್ತು ಪಡೆದುಕೊಂಡಿದೆ!
ಕೇಂದ್ರ ಸರ್ಕಾರ ಕಳೆದ ವರ್ಷವಷ್ಟೇ ಆರಂಭಿಸಿದ “ಪಾರಂಪರಿಕ ತಾಣ ದತ್ತು’ ಪಡೆಯುವ “ಅಪ್ನಿà ಧರೊಹರ್ ಅಪ್ನಿà ಪೆಹಚಾನ್’ ಯೋಜನೆಯ ಅಡಿ 77 ವರ್ಷಗಳ ದೀರ್ಘಾವಧಿ ಇತಿಹಾಸ ಇರುವ ದಾಲ್ಮಿಯಾ ಭಾರತ್ ಗ್ರೂಪ್ 25 ಕೋಟಿ ರೂ. ನೀಡಿ ಕೆಂಪುಕೋಟೆಯನ್ನು ಐದು ವರ್ಷಕ್ಕೆ ದತ್ತು ಪಡೆದಿದೆ. ಏ.24ರಂದು ನಡೆದ ಒಪ್ಪಂದದಲ್ಲಿರುವಂತೆ, ವರ್ಷಕ್ಕೆ 5 ಕೋಟಿ ರೂ.ಗಳನ್ನು ನಿರ್ವಹಣೆ ಮತ್ತು ಪುನರ್ನಿರ್ಮಾಣ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತದೆ.
ಇದಕ್ಕಾಗಿ ನಡೆದ ಹರಾಜಿನಲ್ಲಿ ಪ್ರತಿಷ್ಠಿತ ಕಂಪನಿಗಳಾದ ಇಂಡಿಗೋ ಏರ್ಲೈನ್ಸ್ ಮತ್ತು ಜಿಎಂಆರ್ ಗ್ರೂಪ್ ಕೂಡ ಪಾಲ್ಗೊಂಡಿದ್ದವು. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಗೆ 2017ರ, ಸೆ.17ರಂದು ಚಾಲನೆ ಸಿಕ್ಕಿದ್ದು, ಈಗಾಗಲೇ ಅನೇಕ ಕಂಪನಿಗಳು ಪಾರಂಪರಿಕ ತಾಣಗಳನ್ನು ದತ್ತು ಪಡೆಯಲು ಮುಂದೆ ಬಂದಿವೆ.
ಕಾಂಗ್ರೆಸ್ ಕಟು ಟೀಕೆ
ಖಾಸಗಿ ಕಂಪನಿಯು ಒಪ್ಪಂದಕ್ಕೆ ಸಹಿ ಮಾಡಿ ದತ್ತು ಪಡೆದುಕೊಂಡ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ಈ ಬಗ್ಗೆ ತೀವ್ರ ಟೀಕೆ ಮಾಡಿದೆ. ಟ್ವಿಟರ್ನಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದು ಖಾಸಗೀಕರಣಕ್ಕೆ ಉತ್ತೇಜನ ಎಂದು ಆಪಾದಿಸಿದೆ. ಜತೆಗೆ “ಮುಂದೆ ಇನ್ನಾವುದು ಖಾಸಗೀಕರಣ ಆಗಬಹುದು?’ ಎಂದು ಪ್ರಶ್ನಿಸಿ ಜನಮತಕ್ಕೆ ಆಹ್ವಾನಿಸಿದೆ. ಸಂಸತ್ ಭವನ, ಲೋಕ ಕಲ್ಯಾಣ ಮಾರ್ಗ, ಸುಪ್ರೀಂಕೋರ್ಟ್ ಅಥವಾ ಇವೆಲ್ಲವೂ ಎಂಬ ಆಪ್ಶನ್ ನೀಡಿ ಮತಮಾಡುವಂತೆ ಹೇಳಿದೆ. ಮೊದಲ 18 ಗಂಟೆಗಳಲ್ಲಿ 4,483 ಮಂದಿ ಮತ ಚಲಾಯಿಸಿದ್ದಾರೆ.
ಹಂಪಿ ನಿರ್ವಹಣೆ ಖಾಸಗಿಗೆ?
ಸರ್ಕಾರದ ಯೋಜನೆಯಡಿ ಕರ್ನಾಟಕದ ವಿಶ್ವಪ್ರಸಿದ್ಧ ಹಂಪಿಯನ್ನೂ ಖಾಸಗಿ ಕಂಪನಿಗೆ ದತ್ತು ನೀಡಿ ಅಭಿವೃದ್ಧಿ ಪಡಿಸುವ ಗುರಿಯನ್ನು ಪ್ರವಾಸೋದ್ಯಮ ಸಚಿವಾಲಯ ಹೊಂದಿದೆ. ಕುತುಬ್ ಮಿನಾರ್, ಜಂತರ್ ಮಂತರ್, ಒಡಿಶಾದ ಸೂರ್ಯ ದೇಗುಲ, ಜಮ್ಮು ಕಾಶ್ಮೀರದ ಲೇಹ್ ಅರಮನೆ, ಮಹಾರಾಷ್ಟ್ರದ ಅಜಂತಾ- ಎಲ್ಲೋರ, ತಾಜ್ಮಹಲ್ ಸೇರಿ 100 ತಾಣಗಳು ಈ ಪಟ್ಟಿಯಲ್ಲಿವೆ.
ಹೈಟೆಕ್ ಮಾಹಿತಿ ವ್ಯವಸ್ಥೆ
ಆ್ಯಪ್ ಆಧಾರಿತ ಆಡಿಯೋ ಸಹಿತ ಗೈಡ್, ಡಿಜಿಟಲ್ ಸ್ಕ್ರೀನ್, ಉಚಿತ ವೈಫೈ , ಸ್ಥಳೀಯ ಕಲೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ.
ಒಪ್ಪಂದದಲ್ಲಿ ಏನೇನಿದೆ?
ಕುಡಿಯುವ ನೀರು ಪೂರೈಕೆ
ಆರು ತಿಂಗಳಲ್ಲಿ ಪೀಠೊಪಕರಣ ಬದಲಾವಣೆ
ಶೌಚಾಲಯಗಳ ಪುನರ್ನಿರ್ಮಾಣ
ಕೇಂಪುಕೋಟೆಯ ಸುತ್ತ ದೀಪಗಳ ಅಳವಡಿಕೆ, ನಿರ್ವಹಣೆ
ಕೋಟೆಯಲ್ಲಿ ಪಥ ನಕಾಶೆ ಅಳವಡಿಕೆ
ಇತಿಹಾಸ ಕುರಿತ ಮಾಹಿತಿ ಫಲಕ ಅಳವಡಿಕೆ
1000 ಚದರ ಅಡಿಯ ಪ್ರವಾಸಿ ಕೇಂದ್ರ ನಿರ್ಮಾಣ
ಕೋಟೆಯ ಒಳ-ಹೊರ ಭಾಗದಲ್ಲಿ 3ಡಿ ಪ್ರೊಜೆಕ್ಷನ್
ಬ್ಯಾಟರಿ ಚಾಲಿತ ವಾಹನ ಮತ್ತು ಚಾರ್ಜಿಂಗ್ ಕೇಂದ್ರ ನಿರ್ಮಾಣ
ಪ್ರವಾಸಿಗರ ಅನುಕೂಲಕ್ಕೆ ಉಪಹಾರ ಕೇಂದ್ರ ನಿರ್ಮಾಣ
ಪಾರಂಪರಿಕ ತಾಣಗಳ ನಿರ್ವಹಣೆ ಸಾಧ್ಯವಾಗದು ಎಂದು ಕಾರ್ಪೊ ರೇಟ್ ಕಂಪನಿಗಳಿಗೆ ಹರಾಜು ಹಾಕುವುದು ಉಚಿತವಾದ ನಡೆಯಲ್ಲ.
ವಿಲಿಯಂ ಡೆಲ್ರಿಂಪಲ್, ಇತಿಹಾಸಕಾರ
ಸರ್ಕಾರ ದೇಶದ ಪಾರಂಪರಿಕ ತಾಣಗಳನ್ನು ಮಾರಿಕೊಳ್ಳಲು ಹೊರಟಿದೆ. ದೇಶವನ್ನು ಕಾಪಾಡಿಕೊಳ್ಳಲು ಸರ್ಕಾರದ ಬದ್ಧತೆಯಾದರೂ ಏನು?
ಪವನ್ ಖೇರಾ, ಕಾಂಗ್ರೆಸ್ ವಕ್ತಾರ