”ದೆಹಲಿಯ ಜವಾಬ್ದಾರಿ ತೆಗೆದುಕೊಳ್ಳಿ”: ಮಹಿಳೆಯರಿಗೆ ಮನವಿ ಮಾಡಿದ ಕೇಜ್ರಿವಾಲ್
Team Udayavani, Feb 8, 2020, 10:10 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿ ಗದ್ದುಗೆಗಾಗಿ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಚಳಿಯ ನಡುವೆಯೂ ಮತದಾನ ಬಿರುಸುಗೊಂಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಕರೆ ನೀಡಿದ್ದಾರೆ.
ದಯವಿಟ್ಟು ಮತದಾನ ಮಾಡಿ ಎಂದಿರುವ ಅರವಿಂದ್ ಕೇಜ್ರಿವಾಲ್, ಮಹಿಳೆಯರಿಗೆ ವಿಶೇಷ ಮನವಿ ಮಾಡಿದ್ದಾರೆ. ದೆಹಲಿಯ ಜವಾಬ್ದಾರಿ ನಿಮ್ಮ ಮೇಲಿದೆ ಎಂದಿದ್ದಾರೆ.
ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ದಯವಿಟ್ಟು ನಿಮ್ಮ ಮತ ಚಲಾಯಿಸಿ. ದೆಹಲಿಯ ಮಹಿಳೆಯರಲ್ಲಿ ವಿಶೇಷ ಮನವಿ- ನೀವು ನಿಮ್ಮ ಮನೆಯ ಜವಾಬ್ದಾರಿಯನ್ನು ಹೇಗೆ ಹೊರುತ್ತೀರಾ ಹಾಗೆ ದೆಹಲಿಯ ಜವಾಬ್ದಾರಿಯನ್ನು ನೀವು ನಿಮ್ಮ ಹೆಗಲ ಮೇಲೆ ಹೊರಬೇಕು. ನಿಮ್ಮ ಮನೆಯವರೊಂದಿಗೆ ಚರ್ಚಿಸಿ. ಮನೆಯ ಪುರುಷರನ್ನು ನಿಮ್ಮೊಂದಿಗೆ ಮತದಾನ ಪ್ರಕ್ರಿಯೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ.
70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಲಿದೆ. ಒಟ್ಟು 672 ಅಭ್ಯರ್ಥಿಗಳ ಭವಿಷ್ಯವನ್ನು 1.47 ಕೋಟಿ ಜನರು ನಿರ್ಧರಿಸಲಿದ್ದಾರೆ. ಫೆ.11ರಂದು ಮತ ಎಣಿಕೆ ನಡೆಯಲಿದೆ.