ಡೇರಾ ಆಶ್ರಮಕ್ಕೆ ಸೇನೆ, ಪೊಲೀಸ್ ಎಂಟ್ರಿ; ಶೋಧ ಶುರು, ಕರ್ಫ್ಯೂ ಜಾರಿ
Team Udayavani, Sep 8, 2017, 10:57 AM IST
ಸಿರ್ಸಾ( ಹರ್ಯಾಣ):ಸ್ವ ಘೋಷಿತ ದೇವಮಾನವ, ಅತ್ಯಾಚಾರ ಆರೋಪದಡಿಯಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಸೇರಿದ್ದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಆಶ್ರಮಕ್ಕೆ ಪಂಜಾಬ್, ಹರ್ಯಾಣ ಹೈಕೋರ್ಟ್ ಆದೇಶದಂತೆ ಶುಕ್ರವಾರ ಸೇನಾಪಡೆ ಮತ್ತು ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಶೋಧ ಕಾರ್ಯ ಹಿನ್ನೆಲೆಯಲ್ಲಿ ಕರ್ಫ್ಯೂವನ್ನು ಮುಂದುವರಿಸಲಾಗಿದೆ. ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಸಾವಿರಾರು ಮಂದಿ ಅರೆಸೇನಾ ಪಡೆ ಯೋಧರು, 50 ವಿಡಿಯೋಗ್ರಾಫರ್ಸ್ಸ್ ಹಾಗೂ 12ಕ್ಕೂ ಅಧಿಕ ನಕಲಿ ಕೀಲಿ ತಯಾರಕರನ್ನೊಳಗೊಂಡ ತಂಡ ಆಶ್ರಮವನ್ನು ಪ್ರವೇಶಿಸಿ ಶೋಧ ಕಾರ್ಯದಲ್ಲಿ ತೊಡಗಿದೆ. ಸಿರ್ಸಾದಲ್ಲಿರುವ ಸುಮಾರು 800 ಎಕರೆಯಲ್ಲಿ ಡೇರಾ ಸಚ್ಚಾ ಸೌದಾ ನಿರ್ಮಾಣಗೊಂಡಿದೆ. 800 ಎಕರೆಯಲ್ಲಿ ಡೇರಾ ಸಚ್ಚಾ ಸೌದಾದ ಕೇಂದ್ರ ಆಶ್ರಮ, ಮನೆಗಳು, ಶೈಕ್ಷಣಿಕ ಸಂಸ್ಥೆಗಳು, ಮಾರ್ಕೆಟ್, ಆಸ್ಪತ್ರೆ, ಸ್ಟೇಡಿಯಂ ಇದೆ.
ಡೇರಾ ಆಶ್ರಮ ಶೋಧ ಕಾರ್ಯ ನಡೆಸಬೇಕೆಂಬ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 400ಕ್ಕೂ ಅಧಿಕ ಸೇನಾ ಯೋಧರು, ಬಾಂಬ್ ತಪಾಸಣಾ ತಂಡ, ಕಮಾಂಡೋಗಳು ಹಾಗೂ ಅಗ್ನಿಶಾಮಕದಳಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿರುವುದಾಗಿ ವರದಿ ತಿಳಿಸಿದೆ.
ಸಿಬಿಐ ವಿಶೇಷ ಕೋರ್ಟ್ 2002ರ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ 20 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಡೇರಾ ಸಚ್ಚಾ ಸೌದಾದೊಳಗೆ ಸೇನಾಪಡೆ ಶೋಧಕಾರ್ಯ ನಡೆಸಲು ಆರಂಭಿಸಿದ್ದು, ಈ ಮೂಲಕ ಆಘಾತಕಾರಿಯಾದ ರಹಸ್ಯಗಳು ಹೊರಬೀಳುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.