ಕೋವಿಡ್-19: ವದಂತಿಗಳಿಗೆ ಕಿವಿಗೊಡಬೇಡಿ, ವೈದ್ಯರ ಸಲಹೆ ಪಡೆಯಿರಿ; ದೇಶದ ಜನತೆಗೆ ಮೋದಿ ಕರೆ
Team Udayavani, Mar 7, 2020, 1:16 PM IST
ನವದೆಹಲಿ: ಜಗತ್ತಿನಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಬಗ್ಗೆ ಭಯಬೇಡ, ವದಂತಿಗಳಿಗೆ ಕಿವಿಗೊಡಬೇಡಿ, ನಿಮ್ಮ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ ಮತ್ತು ಸೂಕ್ತ ಸಲಹೆ ಪಡೆಯಿರಿ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ದೈನಂದಿನ ಕಾರ್ಯಚಟುವಟಿಕೆಯಲ್ಲಿ ಶುಭಾಶಯ ಹೇಳುವಾಗ ಶೆಕ್ ಹ್ಯಾಂಡ್ ಬದಲು ನಮಸ್ತೆಯನ್ನು ಬಳಸಿ. ಇದು ಭಯಾನಕ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಇದೀಗ ಜಗತ್ತಿನಾದ್ಯಂತ ಭಾರತದಲ್ಲಿ ಹೆಚ್ಚಾಗಿ ಬಳಸಲ್ಪಡುವ ನಮಸ್ತೆಯನ್ನು ಶುಭಾಶಯ ಕೋರಲು ಪರ್ಯಾಯವಾಗಿ ಬಳಸಲಾಗುತ್ತಿದೆ. ಜನರು ಪರ್ಯಾಯ ಆಂಗಿಕ ಭಾಷೆಯ ಮೊರೆ ಹೋಗಿದ್ದಾರೆ ಎಂದರು.
ಇದಕ್ಕೂ ಮೊದಲು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ತಮ್ಮ ದೇಶದ ಜನರಿಗೆ ಹ್ಯಾಂಡ್ ಶೇಕ್ ಬದಲು ನಮಸ್ತೆಯನ್ನು ಬಳಸಲು ಕರೆ ನೀಡಿದ್ದರು. ಇದು ವೈರಸ್ ಹರಡುವುದನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದಿದ್ದರು.
ಭಾರತದಲ್ಲಿ ಈಗಾಗಲೇ 33 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರ ನಡುವೆಯೇ ಕೊರೊನಾ ವೈರಸ್ ಬಗ್ಗೆ ವದಂತಿಗಳು ಸರಾಗವಾಗಿ ಹರಿಯುತ್ತಿದೆ. ಕೆಲವೊಂದು ವ್ಯಕ್ತಿಗಳು ಇಂತಹದೇ ಪದಾರ್ಥವನ್ನು ಸೇವಿಸಬೇಕೆಂದು ಸುದ್ದಿ ಹರಡುತ್ತಿದ್ದಾರೆ. ಅದಕ್ಕಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಿರಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.