ಅಂಜಿಕೆ ಬೇಡ, ರೋಗ ಲಕ್ಷಣಗಳು ಕಂಡುಬಂದರೆ ಟೆಸ್ಟ್ ಮಾಡಿಸಿ: ಶಿವರಾಜ್ ಸಿಂಗ್ ಚೌಹಾಣ್
Team Udayavani, Jul 26, 2020, 6:03 PM IST
ಭೋಪಾಲ್: ಕೋವಿಡ್-19 ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ ಬೇಡ. ನಿಮಗೆ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ಅಳುಕಿಲ್ಲದೆ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಶಿವರಾಜ್ ಸಿಂಗ್ ಅವರಿಗೆ ಕೋವಿಡ್-19 ಸೋಂಕು ತಾಗಿರುವುದು ಶನಿವಾರ ದೃಢವಾಗಿದೆ. ಅವರು ರಾಜಧಾನಿ ಭೋಪಾಲ್ ನ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಿಂದ ವಿಡಿಯೋ ಮೂಲಕ ಮಾತನಾಡಿರುವ ಚೌಹಾಣ್, ರಾಜ್ಯದ ನನ್ನ ಪ್ರೀತಿಯ ಜನರೇ, ನಾನು ಕ್ಷೇಮವಾಗಿದ್ದೇನೆ. ಇಲ್ಲಿನ ಕೋವಿಡ್ ವಾರಿಯರ್ಸ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ತಮ್ಮ ಜೀವ ಒತ್ತೆಯಿಟ್ಟು ಕೋವಿಡ್ ನಿರ್ಮೂಲನೆಗೆ ಶ್ರಮಿಸುತ್ತಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಟ್ವೀಟ್ ಮಾಡಿ, ಯಾರಿಗಾದರೂ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ. ಇದರಿಂದ ಮಾತ್ರ ಕೋವಿಡ್ 19 ಸೋಂಕು ದೂರ ಮಾಡಬಹುದು ಎಂದು ಹೇಳಿದ್ದರು.