ಅರ್ಥ ವ್ಯವಸ್ಥೆ ಉತ್ತಮವಾಗಿಲ್ಲ: ಮಾಜಿ ಪಿಎಂ ಮನಮೋಹನ ಟೀಕೆ
Team Udayavani, Jan 31, 2017, 3:45 AM IST
ನವದೆಹಲಿ: ದೇಶದ ಅರ್ಥ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿಲ್ಲ. ಹೀಗೆಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ನೋಟುಗಳ ಅಪನಗದೀಕರಣದ ಬಳಿಕ ಮೊದಲು ನಡೆಯುತ್ತಿರುವ ಸಂಸತ್ನ ಅಧಿವೇಶನ ಮತ್ತು ಫೆ.1ರಂದು ಕೇಂದ್ರ ಬಜೆಟ್ ಮಂಡನೆ ಪೂರಕವಾಗಿ ಇಬ್ಬರು ನಾಯಕರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಿಡಿಪಿ ಅಂಕೆ-ಸಂಖ್ಯೆಗಳನ್ನಿಟ್ಟುಕೊಂಡು ಮ್ಯಾಜಿಕ್ ಮಾಡಲು ಮುಂದಾಗುತ್ತಿದೆ. ಆ ಮಾಹಿತಿ ಪ್ರಶ್ನಾರ್ಹ ಎಂದು ಹೇಳಿದ್ದಾರೆ ಚಿದು.
“2017ರಲ್ಲಿ ದೇಶದ ಅರ್ಥ ವ್ಯವಸ್ಥೆಯ ನೈಜ ಸ್ಥಿತಿ’ ಎಂಬ ಮಾಹಿತಿ ಪತ್ರ ಬಿಡುಗಡೆ ಮಾಡಿದ ಬಳಿಕ ಇಬ್ಬರು ನಾಯಕರು ಮಾತನಾಡಿದರು. ಆರಂಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನೋಹನ್ ಸಿಂಗ್ ದೇಶದ ಅರ್ಥ ವ್ಯವಸ್ಥೆಯ ಸ್ಥಿತಿ ಏನೇನೂ ಉತ್ತಮವಾಗಿಲ್ಲ. ಬಂಡವಾಳ ಹೂಡಿಕೆಯೂ ನಡೆದಿಲ್ಲ ಎಂದು ದೂರಿದರು. ಕಾಂಗ್ರೆಸ್ ಬಿಡುಗಡೆ ಮಾಡಿದ ಮಾಹಿತಿ ಪತ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾರತದ ಹಣಕಾಸಿನ ಸ್ಥಿತಿ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಅವರು ಕೇಂದ್ರದ ಮಾಜಿ ಸಚಿವ ಚಿದಂಬರಂ ಪ್ರಶ್ನೆ ಮಾಡಿದರು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸೇರಿದಂತೆ ಹಲವಾರು ಪ್ರಮುಖ ರೇಟಿಂಗ್ ಸಂಸ್ಥೆಗಳು ದೇಶದ ಅರ್ಥ ವ್ಯವಸ್ಥೆಗೆ ನೀಡುವ ರ್ಯಾಕಿಂಗ್ ಅನ್ನು ತಗ್ಗಿಸಿವೆ. ಇದರ ಜತೆಗೆ ಶೇ.6.6ರಷ್ಟು ಪ್ರಮಾಣದಲ್ಲಿ ಜಿಡಿಪಿ ದರವನ್ನು ತಗ್ಗಿಸಿದೆ ಎಂದು ಆಕ್ಷೇಪಿಸಿದರು.
ಎನ್ಡಿಎ ಸರ್ಕಾರ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಸಾಂಖೀÂಕ ಮಾಹಿತಿಗಳನ್ನು ಅದ್ಧೂರಿಯಾಗಿ ನೀಡಲು ಮಾತ್ರ ಕಲಿತುಕೊಂಡಿದೆ. ಆದರೆ ನೈಜ ಪರಿಸ್ಥಿತಿ ಬಗ್ಗೆ ಅದು ಮೌನ ವಹಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಚಿದಂಬಂರಂ ಆಕ್ಷೇಪಿಸಿದರು. ಕೇಂದ್ರ ಸರ್ಕಾರ ಪರಿಸ್ಥಿತಿಯ ನೈಜತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
2008ರಲ್ಲಿ ಜಗತ್ತಿನಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಾಗಿದ್ದಾಗಲೂ ಭಾರತಕ್ಕೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಿರಲಿಲ್ಲ. ಆದರೆ ಹಾಲಿ ಸ್ಥಿತಿಯಲ್ಲಿ ದೇಶದ ಅರ್ಥವ್ಯವಸ್ಥೆ ಉತ್ತಮವಾಗಿಲ್ಲ ಎಂದರು ಚಿದಂಬರಂ.