ಅಗ್ನಿ ವೀರ್ ನೇಮಕಾತಿ ರ್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ
Team Udayavani, Sep 30, 2022, 5:01 PM IST
ಶ್ರೀನಗರ : ಸೇನೆಯ ಅಗ್ನಿವೀರ್ ನೇಮಕಾತಿ ರ್ಯಾಲಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ಹೂಡಿದ್ದ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಶುಕ್ರವಾರ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾರಾಮುಲ್ಲಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಯೀಸ್ ಭಟ್, ಶುಕ್ರವಾರ ಮುಂಜಾನೆ ಪಟ್ಟಾನ್ನ ಯಡಿಪೋರಾ ಪ್ರದೇಶದಲ್ಲಿ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಬಂದ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಶೋಧನೆಯ ಸಮಯದಲ್ಲಿ, ಭಯೋತ್ಪಾದಕರು ಗುಂಡು ಹಾರಿಸಿದರು ಮತ್ತು ದೀರ್ಘಕಾಲದವರೆಗೆ ಎನ್ ಕೌಂಟರ್ ನಡೆಯಿತು ಮತ್ತು ಬೆಳಗ್ಗೆ ಇಬ್ಬರು ಉಗ್ರರು ಕೊಲ್ಲಲ್ಪಟ್ಟರು” ಎಂದು ಎಸ್ಎಸ್ಪಿ ಹೇಳಿದರು.
ಇದನ್ನೂ ಓದಿ: ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗುರುವಾರ ಪಟ್ಟನ್ನ ಹೈದರ್ಬೇಗ್ನಲ್ಲಿ ಮುಕ್ತಾಯಗೊಂಡ ಸೇನೆಯ ಅಗ್ನಿವೀರ್ ನೇಮಕಾತಿ ರ್ಯಾಲಿಯನ್ನು ಗುರಿಯಾಗಿಸಲು ಭಯೋತ್ಪಾದಕರು ಯೋಜಿಸುತ್ತಿದ್ದರು ಎಂದು ಭಟ್ ಹೇಳಿದರು.
ಉಗ್ರರು ಮುಖ್ಯವಾಹಿನಿಗೆ ಸೇರಲು ಪ್ರಯತ್ನಿಸುತ್ತಿರುವ ಯುವಕರನ್ನು ತೊಂದರೆ ಮಾಡಲು ಮತ್ತು ಈ ರ್ಯಾಲಿಯನ್ನು ವಿಫಲಗೊಳಿಸಲು ಯೋಜಿಸುತ್ತಿದ್ದಾರೆ. ಆದರೆ ನಾವು ಅವರ ಯೋಜನೆಗಳನ್ನು ವಿಫಲಗೊಳಿಸಿದ್ದೇವೆ ಎಂದು ಅವರು ಹೇಳಿದರು.
ಭದ್ರತಾ ಪಡೆಗಳು ಎನ್ಕೌಂಟರ್ ಸ್ಥಳದಿಂದ ವಿದೇಶಿ ಉಗ್ರರು ಬಳಸುವ ಎಕೆಎಸ್ -74 ಯು ರೈಫಲ್ ಮತ್ತು ಮೂರು ಮ್ಯಾಗಜೀನ್ಗಳು, ಪಿಸ್ತೂಲ್ ಸೇರಿ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಂಡಿವೆ ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಮೊದಲು ಭಯೋತ್ಪಾದಕರು ತಮ್ಮ ಅಸ್ತಿತ್ವವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಭದ್ರತಾ ಪಡೆಗಳು ಈಗಾಗಲೇ ನೀಡಿದ ಎಚ್ಚರಿಕೆ ಮತ್ತು ಭೇಟಿಗೆ ಮುಂಚಿತವಾಗಿ ಹೆಚ್ಚಿನ ಭದ್ರತೆಯಿಂದಾಗಿ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಸ್ಎಸ್ಪಿ ಹೇಳಿದರು.
ರಜೌರಿ ಮತ್ತು ಬಾರಾಮುಲ್ಲಾದಲ್ಲಿ ಎರಡು ಮೆಗಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಶಾ ಸೆ. 30 ಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅವರ ಭೇಟಿಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.