ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಟಿಎಂಸಿ ಮಾಜಿ ಸಂಸದ ಸಿಂಗ್ ಬಂಧನ
ಕೆಡಿ ಸಿಂಗ್ ಗೆ ಸೇರಿದ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿರುವುದಾಗಿ ವರದಿ ತಿಳಿಸಿದೆ.
Team Udayavani, Jan 13, 2021, 3:19 PM IST
ನವದೆಹಲಿ:ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಮಾಜಿ ಸಂಸದ ಕೆಡಿ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ(ಜನವರಿ 13, 2021) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಂಎಲ್ ಎ ಕಾಯ್ದೆಯಡಿ ಸಿಂಗ್ ಬಂಧನವಾಗಿದೆ ಎಂದು ವರದಿ ಹೇಳಿದೆ. 2019ರ ಎರಡು ಪಿಎಂಎಲ್ ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೆಡಿ ಸಿಂಗ್ ಗೆ ಸೇರಿದ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿರುವುದಾಗಿ ವರದಿ ತಿಳಿಸಿದೆ.
ಕೆಡಿ ಸಿಂಗ್ ಆಲ್ ಕೆಮಿಸ್ಟ್ ಗ್ರೂಪ್ ನ ಅಧ್ಯಕ್ಷರಾಗಿದ್ದು, 2012ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಸಿಂಗ್ ವಿರುದ್ಧದ ಎರಡು ಹಣ ವರ್ಗಾವಣೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.
ಇದು 1900 ಕೋಟಿ ರೂಪಾಯಿಯ ಹಗರಣವಾಗಿದ್ದು, ಜಾರಿ ನಿರ್ದೇಶನಾಲಯ ಈಗಾಗಲೇ ಆಲ್ ಕೆಮಿಸ್ಟ್ ಇನ್ಪ್ರಾ ರಿಯಲ್ಟಿ ಲಿಮಿಟೆಡ್ ನ 239 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿತ್ತು ಎಂದು ವರದಿ ತಿಳಿಸಿದೆ.