jobs scam: ಬಂಗಾಳ ಸಚಿವರ ನಿವಾಸ ಸೇರಿ ಹಲವೆಡೆ ಇಡಿ ದಾಳಿ, ದಾಖಲೆ ಪರಿಶೀಲನೆ
Team Udayavani, Jan 12, 2024, 9:09 AM IST
ಪಶ್ಚಿಮ ಬಂಗಾಳ: 2014 ಮತ್ತು 2018 ರ ನಡುವೆ ಅನೇಕ ನಾಗರಿಕ ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ಮುನ್ಸಿಪಲ್ ಉದ್ಯೋಗ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಾರಿ ನಿರ್ದೇಶನಾಲಯದ ತಂಡವು ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿತು.
ಮಾಹಿತಿಗಳ ಪ್ರಕಾರ, ಬಂಗಾಳ ಅಗ್ನಿಶಾಮಕ ಸೇವೆಗಳ ಸಚಿವ ಸುಜಿತ್ ಬೋಸ್ ಅವರಿಗೆ ಸಂಬಂಧಿಸಿದ ಎರಡು ಸ್ಥಳಗಳು ಮತ್ತು ತೃಣಮೂಲ ಶಾಸಕ ತಪಸ್ ರಾಯ್ ಮತ್ತು ಪುರಸಭೆಯ ಮಾಜಿ ಉಪಾಧ್ಯಕ್ಷರಿಗೆ ಸೇರಿದ ಒಂದು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಶೋಧಿಸುತ್ತಿದ್ದಾರೆ.
ಇಂದು ಬೆಳಗ್ಗೆ 6.40ರ ಸುಮಾರಿಗೆ ವಿವಿಧ ತಂಡಗಳಾಗಿ ದಾಳಿ ಮಾಡಿದ ತಂಡ ದಾಖಲೆಗಳ ಶೋಧ ಕಾರ್ಯ ಆರಂಭಿಸಿದೆ.
ಏಪ್ರಿಲ್ 2023 ರಲ್ಲಿ, ಪುರಸಭೆಗಳ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜೂನ್ 7 ರಂದು, ಸಿಬಿಐ 16 ಸ್ಥಳಗಳ ಮೇಲೆ ದಾಳಿ ನಡೆಸಿತು ಮತ್ತು ನಾಡಿಯಾ, ಹೂಗ್ಲಿ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಮತ್ತು ಸಾಲ್ಟ್ ಲೇಕ್ ಪುರಸಭೆಯ ಬಹು ನಾಗರಿಕ ಸಂಸ್ಥೆಗಳಿಂದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಆ ಬಳಿಕ ಆಗಸ್ಟ್ 2023 ರಲ್ಲಿ, ಪ್ರಕರಣದ ಸಿಬಿಐ ತನಿಖೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅಕ್ಟೋಬರ್ 5 ರಂದು, ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆಹಾರ ಮತ್ತು ಸರಬರಾಜು ಸಚಿವ ರಥಿನ್ ಘೋಷ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು.
ಇದನ್ನೂ ಓದಿ :US, UK Launch Strikes: ಯೆಮೆನ್ನಲ್ಲಿ ಹೌತಿ ನೆಲೆಗಳ ಮೇಲೆ ಬ್ರಿಟನ್, ಅಮೇರಿಕ ದಾಳಿ