ರೈತರಿಗೆ ಭರಪೂರ ಯೋಜನೆ ಶೀಘ್ರ?
Team Udayavani, Dec 28, 2018, 6:00 AM IST
ಹೊಸದಿಲ್ಲಿ: 2019ರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಒಲವನ್ನುಗಳಿಸಲು ಬಿಜೆಪಿ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಸದ್ಯದಲ್ಲೇ ಭರಪೂರ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ನ ಚಳಿಗಾಲದ ಅಧಿವೇಶನ ಜ. 5ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ಪ್ರಧಾನಿ ಮೋದಿ ರೈತರಿಗಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಘೋಷಣೆಗಳ ಕುರಿತಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಬುಧವಾರ ಸುಮಾರು ಮೂರು ತಾಸುಗಳಿಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ.
ರೈತರ ಸಾಲ ಮನ್ನಾಕ್ಕಿಂತಲೂ ದೊಡ್ಡ ಮಟ್ಟದ ಘೋಷಣೆಗಳು ಹೊರಹೊಮ್ಮುವ ಸಾಧ್ಯತೆಯಿದೆ. ಬೆಳೆಗಳ ಬೆಂಬಲ ಬೆಲೆಯು ನೇರ ವಾಗಿ ರೈತರ ಖಾತೆಗೆ ಜಮೆಯಾಗುವುದು, ರೈತರಿಗೆ ನೇರ ಸ್ಥಿರ ಸಬ್ಸಿಡಿ ಪಾವತಿ ವಿಧಾನ, ರೈತರ ಕಿಸಾನ್ ಕಾರ್ಡ್ಗಳ ಮೇಲಿನ ಸಾಲದ ಮಿತಿ ಹೆಚ್ಚಳ ಮುಂತಾದ ಕ್ರಮಗಳ ಬಗ್ಗೆ ಆಲೋಚಿಸಲಾಗಿದೆ.
ಕಳ್ಳರಿಗೆ ನಿದ್ರೆ ಮಾಡಲು ಬಿಡಲ್ಲ: ಇತ್ತೀ ಚಿನ ಐದು ರಾಜ್ಯಗಳ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು “ದೇಶದ ಸೇವಕ ಕಳ್ಳ’ ಎಂದು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ ನರೇಂದ್ರ ಮೋದಿ, “ಕಳ್ಳತನ ನಿಲ್ಲಲೇ ಬೇಕಾದರೆ ಅವರು ಮೋದಿಯನ್ನು ಕಳ್ಳ ಎಂದು ಕರೆಯಲೇಬೇಕಲ್ಲವೇ’ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಪ್ರಶ್ನೆ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿ 1 ವರ್ಷದ ಪೂರೈಸಿದ ಹಿನ್ನೆಲೆ ಯಲ್ಲಿ ಗುರುವಾರ ಧರ್ಮಶಾಲಾ ದಲ್ಲಿ ಆಯೋಜಿಸಲಾಗಿದ್ದ ಬೃಹತ್ ರ್ಯಾಲಿ ಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.”ಸೇವಕನ ಬಗ್ಗೆ ಅವರಿಗೆ ಹೆದರಿಕೆ ಇದೆ. ಆತ ನಿದ್ದೆ ಮಾಡದೇ ಇರುವುದರಿಂದ ಅವರಿಗೆ (ಕಾಂಗ್ರೆಸ್ ನಾಯಕರು) ನಿದ್ದೆಯೂ ಬರುತ್ತಿಲ್ಲ. ಈ ಚೌಕಿದಾರ (ಸೇವಕ) ಕಳ್ಳರನ್ನು ಸುಮ್ಮನೇ ಬಿಡಲಾರ ಎಂದಿದ್ದಾರೆ.
35 ವಿದ್ಯಾರ್ಥಿಗಳಿಗೆ ಗಾಯ: ಪ್ರಧಾನ ಮಂತ್ರಿ ಮೋದಿಯವರ ರ್ಯಾಲಿಗೆ ತೆರಳುತ್ತಿದ್ದ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ 35 ಮಂದಿ ವಿದ್ಯಾರ್ಥಿಗಳಿದ್ದ ಬಸ್ ಅಪ ಘಾತಕ್ಕೀಡಾಗಿ ಅವರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪ್ನಾ ದಳದಲ್ಲಿ ಅತೃಪ್ತಿ
ಎಲ್ಜೆಪಿ ಅತೃಪ್ತಿ ಶಮನವಾಗುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳ ತನ್ನನ್ನು ನಿರ್ಲ ಕ್ಷಿಸಲಾಗುತ್ತಿದೆ ಎಂದು ದೂರಿದೆ. ಈ ಬಗ್ಗೆ ಹೊಸದಿಲ್ಲಿಯಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಆರೋಗ್ಯ ಖಾತೆ ಸಹಾ ಯಕ ಸಚಿವೆ ಅನುಪ್ರಿಯಾ ಪಟೇಲ್ ಪಕ್ಷದ ಅಧ್ಯಕ್ಷರು ಹೇಳಿದ್ದಕ್ಕೆ ನನ್ನ ಸಮರ್ಥನೆ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ತನಗೆ ಉಂಟಾದ ಸೋಲಿನಿಂದ ಪಾಠ ಕಲಿಯ ಬೇಕು ಎಂದು ಅನುಪ್ರಿಯಾ ಪಟೇಲ್ ಹೇಳಿದ್ದಾರೆ.