ಆಂತರಿಕ ಕಲಹ: ಗೋವಾ ಕಾಂಗ್ರೆಸ್ ನ ಐವರು ಶಾಸಕರು ಚೆನ್ನೈಗೆ ಶಿಫ್ಟ್!
Team Udayavani, Jul 16, 2022, 6:32 PM IST
ಪಣಜಿ: ಗೋವಾ ಕಾಂಗ್ರೆಸ್ನಲ್ಲಿನ ಆಂತರಿಕ ಕಲಹ ಇನ್ನೂ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ ಎಂಬುದು ಸ್ಪಷ್ಟವಾಗಿದ್ದು, ಕಳೆದ ಕೆಲ ದಿನಗಳಿಂದ ಅಸಮಾಧಾನದ ಹೊಗೆಯಾಡುತ್ತಲೇ ಇದ್ದು, ಇದೀಗ ಐವರು ಶಾಸಕರು ಚೆನ್ನೈಗೆ ಶಿಫ್ಟ್ ಆಗಿದ್ದು, ಈ ಕುರಿತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಎದ್ದಿದೆ.
ಸಂಕಲ್ಪ್ ಅಮೋನ್ಕರ್, ಯೂರಿ ಅಲೆಮಾವ್, ರುಡಾಲ್ಫ್ ಫೆರ್ನಾಂಡಿಸ್, ಎಲ್ಟನ್ ಡಿ ಕೋಸ್ಟಾ ಮತ್ತು ಕಾರ್ಲೋಸ್ ಫೆರೇರಾ ಅವರು ಚೆನ್ನೈಗೆ ಸ್ಥಳಾಂತರಗೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಿದಾಗ, ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ.
ಚೆನ್ನೈ ಪ್ರವಾಸದಲ್ಲಿರುವ ಶಾಸಕರನ್ನು ಗೋವಾದ ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿದಾಗ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ರವರೊಂದಿಗೆ ಮಹತ್ವದ ಚರ್ಚೆ ನಡೆಸಬೇಕಿದ್ದ ಕಾರಣ ಚೆನ್ನೈಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಕೆಲ ರಾಜಕೀಯ ಮುಖಂಡರು ಈ ಬಗ್ಗೆ ಖಾಸಗಿಯಾಗಿ ಮಾತನಾಡಿದ್ದು, ಗೋವಾ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಹಗರಣ ಇನ್ನೂ ಮುಗಿದಿಲ್ಲ. ಪಕ್ಷದ ಕೆಲವು ಆಂತರಿಕ ವಿಚಾರಗಳ ಬಗ್ಗೆ ಎಲ್ಲ ನಾಯಕರಿಗೂ ಆಕ್ಷೇಪವಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.